Saturday, July 28, 2018

ಇಂದಿನ ಇತಿಹಾಸ History Today ಜುಲೈ 28

 

2018: ಮುಂಬೈ/ ಲಕ್ನೋ:  ಮಹಾರಾಷ್ಟ್ರದಲ್ಲಿ ಮಹಾಬಲೇಶ್ವರದ ಮಾರ್ಗದಲ್ಲಿದ್ದ ಬಸ್ಸೊಂದು ಪ್ರಪಾತಕ್ಕೆ ಉರುಳಿದ ಪರಿಣಾಮವಾಗಿ ಪಿಕ್ನಿಕ್ ಹೊರಟಿದ್ದ ೩೪ ಮಂದಿ ಅಸು ನೀಗಿದ್ದು, ಉತ್ತರ ಪ್ರದೇಶದಲ್ಲಿ 3 ದಿನದಿಂದ ಸತತ ಸುರಿಯುತ್ತಿರುವ ಭಾರೀ ಮಳೆಗೆ ೪೯ ಜನರು ಪ್ರಾಣ ಕಳೆದುಕೊಂಡರು. ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಈದಿನ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಬಸ್ಸೊಂದು ಕಮರಿಗೆ ಉರುಳಿದ ಪರಿಣಾಮವಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ೩೪ ಮಂದಿಯ ಪೈಕಿ ೩೩ ಮಂದಿ ದಾರುಣವಾಗಿ ಅಸು ನೀಗಿದ್ದಾರೆ ಎಂದು ಮುಂಬೈಯಿಂದ ಬಂದ ವರದಿ ತಿಳಿಸಿತು. ಬಸ್ಸು ದುರಂತಕ್ಕೆ ಈಡಾದ ವೇಳೆಯಲ್ಲಿ ದಾಪೋಲಿ ಕೃಷಿ ವಿಶ್ವವಿದ್ಯಾಲಯದ ಸುಮಾರು ೩೪ ಮಂದಿ ಸಿಬ್ಬಂದಿ ಅದರಲ್ಲಿ ಮಹಾಬಲೇಶ್ವರದ ಕಡೆಗೆ ಪ್ರಯಾಣ ಹೊರಟಿದ್ದರು. ಮುಂಬೈಯಿಂದ ೧೮೦ ಕಿಮೀ ದೂರದ ಪೊಲಾದ್ಪುರ ಪಟ್ಟಣದ ಸಮೀಪ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಬಸ್ಸು ೫೦೦ ಅಡಿ ಆಳದ ಕಮರಿಗೆ ಉರುಳಿತು ಎಂದು ಜಿಲ್ಲಾ ಕಲೆಕ್ಟರ್ ವಿಜಯ್ ಸೂರ್ಯವಂಶಿ ತಿಳಿಸಿದರು. ರಾಷ್ಟ್ರೀಯ ದುರಂತ ಸ್ಪಂದನಾ ಪಡೆ (ಎನ್ ಡಿ ಆರ್ ಎಫ್) ತಂಡಗಳನ್ನು ತತ್ ಕ್ಷಣವೇ ದುರಂತ ಸ್ಥಳಕ್ಕೆ ರವಾನಿಸಲಾಗಿದ್ದು, ನತದೃಷ್ಟ ಬಸ್ಸಿನಲ್ಲಿರುವ ಶವಗಳನ್ನು ಹೊರ ತರುವ ಕಾರ್ಯಾಚರಣೆ ನಡೆಯುತ್ತಿದೆ. ಒಂದು ಡಜನ್ ಆಂಬುಲೆನ್ಸ್ ಗಳು ಮತ್ತು ೧೫ ಮಂದಿ ವೈದ್ಯರು ಸ್ಥಳಕ್ಕೆ ತಲುಪಿದ್ದಾರೆ ಎಂದು ಅಡಿಷನಲ್ ಎಸ್ ಪಿ ಸಂಜಯ್ ಪಾಟೀಲ್ ನುಡಿದರು.  ಪ್ರಯಾಣಿಕರ ಪೈಕಿ ಪ್ರಕಾಶ್ ರಾಜಾರಾಮ್ ಸಾವಂತ್ ದೇಸಾಯಿ ಎಂಬುದಾಗಿ ಗುರುತಿಸಲಾದ ಒಬ್ಬರು ದುರಂತದ ವೇಳೆಯಲ್ಲಿ ಬಸ್ಸಿನಿಂದ ಹೊರಕ್ಕೆ ಜಿಗಿದು ಪಾರಾಗಿದ್ದಾರೆ ಎಂದು ಹೇಳಲಾಯಿತು.
ಬಸ್ಸಿನಲ್ಲಿದ್ದ ಪ್ರಯಾಣಿಕರು ಸತಾರಾ ಜಿಲ್ಲೆಯ ಬೆಟ್ಟಧಾಮ ಮಹಾಬಲೇಶ್ವರಕ್ಕೆ ಪಿಕ್ ನಿಕ್ ಹೊರಟಿದ್ದರು. ತಿರುವಿನಲ್ಲಿ ಸಾಗುತ್ತಿದ್ದಾಗ ಚಾಲಕನಿಗೆ ವಾಹನದ ಮೇಲಿನ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಬಸ್ಸು ಕಮರಿಗೆ ಉರುಳಿತು ಎಂದು ಎಸ್ ಪಿ ಅನಿಲ್ ಪರ್ಸಾಕರ್ ಹೇಳಿದರು. ಜುಲೈ ೧೯ರಂದು ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಇಂತಹುದೇ ಅಪಘಾತದಲ್ಲಿ ೧೪ ಮಂದಿ ಸಾವನ್ನಪ್ಪಿದ್ದರು.  ಲಕ್ನೋ ವರದಿ: ಉತ್ತರ ಪ್ರದೇಶದಲ್ಲಿ ಸತತ ಸುರಿಯುತ್ತಿರುವ ಮಳೆಗೆ ೪೯ ಮಂದಿ ಬಲಿಯಾಗಿದ್ದು ಅವರ ಪೈಕಿ ೧೧ ಜನ ಸಹರಾನ್ ಪುರ ಒಂದೇ ಕಡೆ ಅಸು ನೀಗಿದ್ದಾರೆ ಎಂದು ಲಕ್ನೋದಲ್ಲಿನ ಪರಿಹಾರ ಕಮೀಷನರ್ ಕಚೇರಿಯ ವಕ್ತಾರರು ತಿಳಿಸಿದರು.
ಆಗ್ರಾ ಮತ್ತು ಮೀರತ್‌ನಲ್ಲಿ ಆರು ಸಾವುಗಳು ಸಂಭವಿಸಿದ್ದರೆ, ನಾಲ್ವರು ಮೈನ್ ಪುರಿಯಲ್ಲಿ, ಮೂವರು ಕಸ್ ಗಂಜ್ ನಲ್ಲಿ, ತಲಾ ಇಬ್ಬರು ಬರೇಲಿ, ಬಾಗ್ಪತ್ ಮತ್ತು ಬುಲಂದಶಹರದಲ್ಲಿ ಮತ್ತು ಕಾನ್ಪುರ ದೆಹತ್, ಮಥುರಾ, ಗಾಜಿಯಾಬಾದ್, ಹಾಪುರ, ರಾಯ್ ಬರೇಲಿ, ಜಲೌನ್, ಜೌನ್ಪುರ, ಪ್ರತಾಪಗಢ, ಬಂಡಾ, ಫಿರೋಜಾಬಾದ್, ಅಮೇಥಿ, ಕಾನ್ಪುರ ಮತ್ತು ಮುಜಾಫ್ಫರನಗರದಲ್ಲಿ ತಲಾ ಒಬ್ಬರು ಅಸು ನೀಗಿದ್ದಾರೆ ಎಂದು ಅವರು ನುಡಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲ ಜಿಲ್ಲೆಗಳ ಹಿರಿಯ ಅಧಿಕಾರಿಗಳಿಗೆ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ವ್ಯಾಪಕ ಪ್ರವಾಸ ಮಾಡುವಂತೆ ಮತ್ತು ಜನರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ವಕ್ತಾರ ಹೇಳಿದರು. ಮಳೆಯಿಂದ ತೀವ್ರ ತೊಂದರೆಗೆ ಒಳಗಾದವರಿಗೆ ಹಣಕಾಸಿನ ನೆರವು ಮತ್ತು ವೈದ್ಯಕೀಯ ನೆರವಿಗೆ ವ್ಯವಸ್ಥೆ ಮಾಡುವಂತೆಯೂ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಅವರು ನುಡಿದರು.

2018: ಪುಣೆ: ಪುಣೆ ನಗರದಲ್ಲಿ ನಡೆಸಲಾದ ಅತ್ಯಂತ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಪುಣೆಯ ಕತ್ತಾಜ್ ಪ್ರದೇಶದ ಮುಸ್ಲಿಮ್ ಅನಾಥಾಶ್ರಮವೊಂದರಿಂದ ೩೬ ಮಕ್ಕಳನ್ನು ಕಾಮುಕ ಮೌಲಾನಾ ಮುಷ್ಠಿಯಿಂದ ರಕ್ಷಿಸಲಾಗಿದೆ. ಮೌಲಾನಾ ನಡೆಸುತ್ತಿದ್ದ ನಿರಂತರ ಲೈಂಗಿಕ ಶೋಷಣೆ ಬಗ್ಗೆ ಇಬ್ಬರು ಮಕ್ಕಳು ಆಪಾದಿಸಿದ ಬಳಿಕ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಆರೋಪಿ ಮೌಲಾನಾನನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಗೆ ಕಾಯ್ದೆಯ ವಿವಿಧ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ೧೦ರ ಹರೆಯದ ಬಾಲಕರಿಬ್ಬರು ಇತ್ತೀಚೆಗೆ ಅನಾಥಾಶ್ರಮದಿಂದ ತಪ್ಪಿಸಿಕೊಂಡಿದ್ದು ಅವರನ್ನು ಸರ್ಕಾರೇತರ ಸಂಘಟನೆಯೊಂದು ಪುಣೆ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಿತ್ತು.  ಪರಾರಿಯಾಗಲು ಯತ್ನ ನಡೆಸಿದ್ದೇಕೆ ಎಂಬುದಾಗಿ ಸತತವಾಗಿ ಪ್ರಶ್ನಿಸಿದಾಗ ಈ ಬಾಲಕರು ತಾವು ಮೌಲಾನಾ ಸಹಪಾಠಿಯ ಮೇಲೆ ಶಿಕ್ಷಣದ ಹೆಸರಿನಲ್ಲಿ ಪದೇ ಪದೇ ನಡೆಸಿದ ಲೈಂಗಿಕ ಕಿರುಕುಳವನ್ನು ಕಂಡು ಇಂತಹ ಹಿಂಸೆಯಿಂದ ಪಾರಾಗಲು ಅನಾಥಾಶ್ರಮದಿಂದ ಪರಾರಿಯಾಗಿರುವುದಾಗಿ ತಿಳಿಸಿದರು ಎಂದು ಪೊಲೀಸರು ಹೇಳಿದರು. ಜಮಾಯಿತುಲ್ ಖೈರಿಯಾ ಅಲ್-ಇಸ್ಲಾಮಿಯಾ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಅನಾಥಾಶ್ರಮದಲ್ಲಿ ೨೧ರ ಹರೆಯದ ಆರೋಪಿ ಮೌಲಾನಾ ರಹೀಮ್ ಶಿಕ್ಷಕನಾಗಿದ್ದಾನೆ.  ರಕ್ಷಿಸಲ್ಪಟ್ಟಿರುವ ಮಕ್ಕಳು ೮ರಿಂದ ೧೫ರ ಒಳಗಿನ ಹರೆಯದವರಾಗಿದ್ದು, ಅನಾಥಾಶ್ರ,ಮದಲ್ಲಿ ಶೌಚಾಲಯಗಳು ಕೂಡಾ ಇಲ್ಲದ ಅಮಾನವೀಯ ಸ್ಥಿತಿಯಲ್ಲಿ ಇರಬೇಕಾಗಿತ್ತು ಎಂದು ಅನಾಥಾಶ್ರಮದ ಮೇಲೆ ದಾಳಿ ನಡೆಸಿದ ಪೊಲೀಸರು ತಿಳಿಸಿದರು. ಮಕ್ಕಳ ಕಲ್ಯಾಣ ಸಮಿತಿಯು (ಸಿ ಡಬ್ಲ್ಯೂಸಿ) ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಎಲ್ಲ ಮಕ್ಕಳೂ ಬಿಹಾರದವರಾಗಿದ್ದು, ಕೆಲವರು ಅನಾಥರು ಕೂಡಾ ಅಲ್ಲ ಎಂಬುದು ತನಿಖೆಯ ವೇಳೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಮಕ್ಕಳ ಕಳ್ಳಸಾಗಣೆ ಜಾಲ ಕೆಲಸ ಮಾಡುತ್ತಿರಬಹುದೇ ಎಂಬ ಗುಮಾನಿಯೂ ಹುಟ್ಟಿದೆ.
ನಾವು ಇಬ್ಬರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಕರೆದೊಯ್ದು ಮಾತನಾಡಿಸಿದಾಗ ಅವರು ತಾವು ಶಿಕ್ಷಕನಿಂದ ಲೈಂಗಿಕ ಶೋಷಣೆಗೆ ಗುರಿಯಾಗಿರುವುದಾಗಿ ಬಹಿರಂಗ ಪಡಿಸಿದರು. ಬಳಿಕ ನಾವು ಪೊಲೀಸರನ್ನು ಸಂಪರ್ಕಿಸಿ ಅನಾಥಾಶ್ರಮದ ಮೇಲೆ ದಾಳಿ ನಡೆಸಿದೆವು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ಯಾಮಿನಿ ಅಡ್ಬೆ ತಿಳಿಸಿದರು.

2018: ಶ್ರೀನಗರ: ಪಾಕಿಸ್ತಾನದ ಪ್ರಧಾನಿಯಾಗಲಿರುವ ಇಮ್ರಾನ್ ಖಾನ್ ಅವರ ಮುಂದಿಟ್ಟಿರುವ ಮೈತ್ರಿಯ ಕೊಡುಗೆ ಬಗ್ಗೆ ಧನಾತ್ಮಕವಾಗಿ ಸ್ಪಂದಿಸುವಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.  ’ಪಾಕಿಸ್ತಾನವು ಹೊಸ ಸರ್ಕಾರ, ಹೊಸ ಪ್ರಧಾನಿಯನ್ನು ಪಡೆಯುತ್ತಿದೆ. ಅವರು (ಮಿಸ್ಟರ್ ಖಾನ್) ಮೈತ್ರಿಯ ಕೊಡುಗೆ ಮುಂದಿಟ್ಟಿದ್ದಾರೆ. ಈ ಕೊಡುಗೆ ಬಗ್ಗೆ ಧನಾತ್ಮಕವಾಗಿ ಸ್ಪಂದಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಬಯಸುತ್ತೇನೆ ಎಂದು ಮೆಹಬೂಬಾ ನುಡಿದರು.  ಪಾಕಿಸ್ತಾನದ ಚುನಾವಣೆಯಲ್ಲಿ ವಿಜಯ ಗಳಿಸಿದ್ದಕ್ಕಾಗಿ ಮುಫ್ತಿ ಅವರು ಇಮ್ರಾನ್ ಖಾನ್ ಅವರನ್ನು ಅಭಿನಂದಿಸಿದರು.  ಬಿಜೆಪಿ ಜೊತೆಗಿನ ಮೈತ್ರಿ ವಿಷ ಕುಡಿದಂತೆ: ಬಿಜೆಪಿ ಜೊತೆಗಿನ ಎರಡು ವರ್ಷಗಳ ಮೈತ್ರಿ ಕಾಲದಲ್ಲಿ ತಾವು ಅಗಾಧ ಒತ್ತಡ ಎದುರಿಸಿದ್ದಾಗಿ ಹೇಳಿದ ಮೆಹಬೂಬಾ ’ಅದು (ಬಿಜೆಪಿ ಜೊತೆಗಿನ ಮೈತ್ರಿ) ಕಪ್ ವಿಷ ಕುಡಿದಂತಿತ್ತು. ನಾನು ರಾಜಿಯಾಗಲಿಲ್ಲ. ನಾನು ಹಲವಾರು ಬಾರಿ ಪ್ರಧಾನಿಯನ್ನು ಭೇಟಿ ಮಾಡಿದಾಗ, ಪಾಕಿಸ್ತಾನ ಮತ್ತು ಹುರಿಯತ್ ಜೊತೆಗೆ ಮಾತುಕತೆ ಆರಂಭಿಸುವಂತೆ ಅವರಿಗೆ ಹೇಳಿದ್ದೆ. ಕಾಶ್ಮೀರದಲ್ಲಿ ಶಾಂತಿಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಕಸ್ಟಡಿಯಿಂದ ಹುರಿಯತ್ ನಾಯಕರನ್ನು ಬಿಡುಗಡೆ ಮಾಡುವಂತೆ ನಾನು ಕೇಂದ್ರಕ್ಕೆ ಸೂಚಿಸಿದ್ದೆ ಎಂದು ಹೇಳಿದರು. ಮುಫ್ತಿ ಅವರು ಪಕ್ಷದ ಸ್ಥಾಪನಾ ದಿನ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಜೂನ್ ತಿಂಗಳಲ್ಲಿ ಮೈತ್ರಿಕೂಟದಿಂದ ಬಿಜೆಪಿಯು ಹೊರಬಂದ ಬಳಿಕ ಬಹಿರಂಗವಾಗಿ ಮುಫ್ತಿ ಅವರು ಕಾಣಿಸಿಕೊಂಡದ್ದು ಇದೇ ಪ್ರಥಮ.  ೨೦೧೬ರಲ್ಲಿ ನಡೆದ ಚಳವಳಿ ಕಾಲದಲ್ಲಿ ಬೀದಿಗಳಲ್ಲಿ ನಾಗರಿಕರು ಸಾವನ್ನಪ್ಪಿದ್ದನ್ನು ಪ್ರಸ್ತಾಪಿಸಿದ ಮೆಹಬೂಬಾ, ಪೆಲ್ಲೆಟ್ ಸಂತ್ರಸ್ತರ ನೋವು ನನಗೆ ಅನುಭವವಾಗುತ್ತದೆ ಎಂದು ಹೇಳಿದರು.  ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟಿನ ಮುಂದೆ ಸಂವಿಧಾನದ ೩೪೫-ಎ ಪರಿಚ್ಛೇದವು ವಿಚಾರಣೆಗಾಗಿ ಬರಲಿದ್ದು, ’ಇದು ಎಲ್ಲ ಕಾಶ್ಮೀರಿ ರಾಜಕೀಯ ಪಕ್ಷಗಳಿಗೆ ಸವಾಲು ಎಂದು ನುಡಿದರು. ನಾವು ಕಳೆದ ಎರಡು ವರ್ಷಗಳಲ್ಲಿ ಮಾಡಿದ ರೀತಿಯಲ್ಲೇ ಈ ಪರಿಚ್ಛೇದವನ್ನು ರಕ್ಷಿಸಿಕೊಳ್ಳಲು ಎಲ್ಲ ಪಕ್ಷಗಳೂ ಪಕ್ಷಭೇದ ತೊರೆದು ಶ್ರಮಿಸಬೇಕು ಎಂದು ಅವರು ಹೇಳಿದರು.

2018: ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ೨೭೦ ಸ್ಥಾನಗಳಿಗೆ ಸ್ಪರ್ಧಿಸಿದ್ದ ಇಮ್ರಾನ್ ಖಾನ್ ಅವರು ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ೧೧೬ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದೆ ಎಂದು ಪಾಕ್ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಅಧಿಕೃತ ಫಲಿತಾಶ ತಿಳಿಸಿತು. ಜುಲೈ ೨೫ರಂದು ನಡೆದ ಸಂಸದೀಯ ಚುನಾವಣೆಯ ಅಂತಿಮ ಫಲಿತಾಂಶವನ್ನು ವಿಳಂಬದ ಕಾರಣಕ್ಕಾಗಿ ಸೋತ ಪಕ್ಷಗಳ ನಾಯಕರ ತೀವ್ರ ಆಕ್ರೋಶ, ಅಕ್ರಮಗಳ ಆರೋಪದ ಮಧ್ಯೆ ಚುನಾವಣಾ ಆಯೋಗ ಈದಿನ ಪ್ರಕಟಿಸಿತು.  ಭ್ರಷ್ಟಾಚಾರ ಆರೋಪದಲ್ಲಿ ಸೆರೆಮನೆ ಸೇರಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಮುಸ್ಲಿಮ್ ಲೀಗ್- ನವಾಜ್ (ಪಿಎಂಎಲ್-ಎನ್) ೬೪ ಸ್ಥಾನಗಳೊಂದಿಗೆ ಮತ್ತು ಮಾಜಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು (ಪಿಪಿಪಿ) ೪೩ ಸ್ಥಾನಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ ಎಂದು ಪಾಕಿಸ್ತಾನ ಚುನಾವಣಾ ಆಯೋಗ (ಇಸಿಪಿ) ಹೇಳಿತು. ಮುತ್ತಹಿದಾ ಮಜ್ಲಿಸ್-ಇ-ಅಮ್ಲ್ ಪಾಕಿಸ್ತಾನ್ (ಎಂಎಂಎಪಿ) ಪಕ್ಷವು ೧೩ ಸ್ಥಾನಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದೆ. ೧೩ ಮಂದಿ ಸ್ವತಂತ್ರ ಅಭ್ಯರ್ಥಿಗಳು ಕೂಡಾ ಜಯಗಳಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್ -ಇ-ಇನ್ಸಾಫ್ (ಪಿಟಿಐ) ಪಕ್ಷವು ಸರ್ಕಾರ ರಚಿಸಲು ಇನ್ನಷ್ಟು ಸದಸ್ಯರ ಬೆಂಬಲ ಪಡೆಯಬೇಕಾಗಿರುವ ಹಿನ್ನೆಲೆಯಲ್ಲಿ ಈ ಪಕ್ಷೇತರ ಅಭ್ಯರ್ಥಿಗಳು ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇದೆ.  ಕರಾಚಿ ನಗರವನ್ನು ದಶಕಗಳ ಕಾಲ ಆಳಿದ್ದ ಕರಾಚಿ ಮೂಲದ ಮುತ್ತಹಿದಾ ಕ್ವಾಮಿ ಮೂವ್ ಮೆಂಟ್ ಪಾಕಿಸ್ತಾನ್ (ಎಂಕ್ಯೂಎಂಪಿ) ಪಕ್ಷವು ಕೇವಲ ೬ ಸ್ಥಾನಗಳನ್ನು ಪಡೆಯಿತು. ಪ್ರತಿಯೊಂದು ರಾಜಕೀಯ ಪಕ್ಷವು ಪಡೆದ ಒಟ್ಟು ಮತಗಳ ವಿವರವನ್ನೂ ಚುನಾವಣಾ ಆಯೋಗ ಈದಿನ ಬಿಡುಗಡೆ ಮಾಡಿತು.  ಪಿಟಿಐ ೧,೬೮,೫೭,೦೩೫ ಮತಗಳೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, ಪಿಎಂಎಲ್ -ಎನ್ ೧,೨೮,೯೪,೨೨೫ ಮತಗಳೊಂದಿಗೆ ೨ನೇ ಸ್ಥಾನ ಮತ್ತು ಪಿಪಿಪಿ ೬೮,೯೪,೨೯೬ ಮತಗಳೊಂದಿಗೆ ಮೂರನೇ ಸ್ಥಾನ ಪಡೆದಿವೆ. ಪಕ್ಷೇತರ ಅಭ್ಯರ್ಥಿಗಳು ೬೦,೧೧,೨೯೭ ಮತಗಳನ್ನು ಪಡೆದಿದ್ದು ಮತಗಳ ಆಧಾರದಲ್ಲಿ ಅತ್ಯಂತ ದೊಡ್ಡ ಗುಂಪು ಎಂಬುದಾಗಿ ಪರಿಗಣಿತರಾಗಿದ್ದಾರೆ.  ಧಾರ್ಮಿಕ ಪಕ್ಷಗಳ ಪೈಕಿ ಎಂಎಂಎಪಿ ೨೫,೩೦,೪೫೨ ಮತಗಳನ್ನು ಗಳಿಸಿದ್ದರೆ, ತೆಹ್ರೀಕ್ -ಇ-ಲಬೈಕ್ ಪಾಕಿಸ್ತಾನ್ ಪಕ್ಷವು ೨೧,೯೧,೬೭೯ ಮತಗಳನ್ನು ಮತ್ತು ಅಲ್ಲಾ-ಹೊ-ಅಕ್ಬರ್ ತೆಹ್ರೀಕ್ ೧,೭೧,೪೪೧ ಮತಗಳನ್ನು ಪಡೆದಿದೆ ಎಂದು ಆಯೋಗ ಹೇಳಿತು.  ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳ ಚುನಾವಣೆಯ ಮತದಾನ ಪ್ರಮಾಣವನ್ನೂ ಆಯೋಗ ಪ್ರಕಟಿಸಿತು. ರಾಷ್ಟ್ರೀಯ ಅಸೆಂಬ್ಲಿಗೆ ಶೇಕಡಾ ೫೧.೭, ಪಂಜಾಬ್ ಪ್ರಾಂತೀಯ ಅಸೆಂಬ್ಲಿಗೆ ಶೇಕಡಾ ೫೫, ಸಿಂಧ್ ಪ್ರಾಂತೀಯ ಅಸೆಂಬ್ಲಿಗೆ ಶೇಕಡಾ ೪೭.೬, ಖೈಬರ್ ಫಕ್ತೂನ್‌ಖ್ವಾ ಅಸೆಂಬ್ಲಿಗೆ ಶೇಕಡಾ ೪೫.೫ ಮತ್ತು ಬಲೂಚಿಸ್ತಾನ ಪ್ರಾಂತೀಯ ಅಸೆಂಬ್ಲಿಗೆ ಶೇಕಡಾ ೪೫.೨ ರಷ್ಟು ಮತದಾನ ಆಗಿದೆ ಎಂದು ಆಯೋಗ ತಿಳಿಸಿತು. ಪಂಜಾಬಿನಲ್ಲಿ ಪಿಎಂಎಲ್-ಎನ್ ಪಕ್ಷವು ೧೨೯ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದ್ದರೆ, ಸಿಂಧ್ ನಲ್ಲಿ ಪಿಪಿಪಿಯು ೭೬ ಸ್ಥಾನಗಳೊಂದಿಗೆ, ಪಿಟಿಐ ಖೈಬರ್ ಫಕ್ತೂನ್ ಖ್ವಾದಲ್ಲಿ ೬೬ ಸ್ಥಾನಗಳೊಂದಿಗೆ ಮತ್ತು ಬಲೂಚಿಸ್ತಾನದಲ್ಲಿ ಬಲೂಚಿಸ್ತಾನ ಅವಾಮೀ ಪಕ್ಷವು ೧೫ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷಗಳಾಗಿವೆ.  ಸುನ್ನಿ ಬ್ರೈಲ್ವಿ ಪಂಥದ ಸಿಂಧ್ ಅಸೆಂಬ್ಲಿಯಲ್ಲಿ ತೆಹ್ರೀಕ್-ಇ-ಲಬೈಕ್ ಪಾಕಿಸ್ತಾನ್ (ಟಿಎಲ್ಪಿ) ಪಕ್ಷವು ೨ ಸ್ಥಾನ ಗೆದ್ದಿದೆ. ಇಸ್ಲಾಮಾಬಾದಿಗೆ ಕಳೆದ ವರ್ಷ ಮುತ್ತಿಗೆ ಹಾಕುವಲ್ಲಿ ಈ ಪಕ್ಷವು ಯಶಸ್ಸು ಗಳಿಸಿತ್ತು.  ಏನಿದ್ದರೂ ಮುಂಬೈ ಭಯೋತ್ಪಾದಕ ದಾಳಿಗಳ ಸೂತ್ರಧಾರ ಹಫೀಜ್ ಸಯೀದ್ ನಿಷ್ಠರ ಅಲ್ಲಾ-ಹೊ-ಅಕ್ಬರ್ ತೆಹ್ರೀಕ್ ಪಕ್ಷ ಮಾತ್ರ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲಲಾಗದೆ ಭಾರೀ ಮುಖಭಂಗ ಅನುಭವಿಸಿತು.

2018: ಬೆಂಗಳೂರು: ೨೦೧೯ರಲ್ಲಿ ಕಠಿಣ ಸಮರ ಎದುರಿಸಲು ಸಜ್ಜಾಗುವಂತೆ ಪಕ್ಷದ ಕಾರ್‍ಯಕರ್ತರಿಗೆ ಇಲ್ಲಿ ಕರೆ ನೀಡಿದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು, ಪಕ್ಷಕ್ಕೆ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರ ಹೆಸರು ಬಳಸಿಕೊಂಡು ಇನ್ನು ಓಟು ಪಡೆಯಲು ಸಾಧ್ಯವಿಲ್ಲ, ಚುನಾವಣೆ ಗೆಲ್ಲಲು ಬೂತ್ ಮಟ್ಟದಲ್ಲೇ ಕೆಲಸ ಮಾಡಿ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು.  ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಸವಾಲು ಹಾಕಲಾಗದ ರಾಜಕೀಯ ಪಕ್ಷವಾಗಿ ಇದ್ದ ಕಾಲವಿತ್ತು. ಈಗ ಅದು ಬದಲಾಗಿದೆ. ಆದ್ದರಿಂದ ತಳಮಟ್ಟದಲ್ಲೇ ಪಕ್ಷವನ್ನು ಬಲ ಪಡಿಸಬೇಕಾದ ಅಗತ್ಯ ಇದೆ ಎಂದು ಅವರು ನುಡಿದರು. ‘ಅದೊಂದು ಕಾಲವಿತ್ತು. ಕಾಂಗ್ರೆಸ್ ಪಕ್ಷವು ಜವಾಹರಲಾಲ್ ನೆಹರೂ ಅಥವಾ ಇಂದಿರಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿದರೆ ಸಾಕಿತ್ತು, ಲಕ್ಷಾಂತರ ಜನ ಮತಗಟ್ಟೆಗೆ ಬಂದು ವೋಟು ನೀಡುತ್ತಿದ್ದರು ಎಂದು ಚಿದಂಬರಂ ಹೇಳಿದರು.  ‘ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಪ್ರಚಾರದಿಂದ ಮೋಸಹೋಗಬೇಡಿ. ಅದು ಸಾಧ್ಯವಿಲ್ಲ. ಹಾಗೇನಾದರೂ ಇದ್ದರೆ ಅದು ಬಿಜೆಪಿ ಮುಕ್ತ ಭಾರತ ಎಂದು ಕಾಂಗ್ರೆಸ್ ನಾಯಕ ನುಡಿದರು.  ಈಗ ಮತಗಟ್ಟೆ ಮಟ್ಟದ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಪ್ರತಿಯೊಂದು ಮತಗಟ್ಟೆಯಲ್ಲೂ ನಾವು ಹಾಜರಿರಬೇಕು. ಪ್ರತಿಯೊಂದು ಮತಗಟ್ಟೆಯಲ್ಲೂ  ನಮ್ಮ ಸಂಖ್ಯೆ ಸಾಕಷ್ಟು ಇರಬೇಕು. ನೆಲದ ಮೇಲೆ ನಮ್ಮ ಹೆಜ್ಜೆಗಳು ಎಷ್ಟಿವೆ ಎಂಬುದೇ ಈಗ ಮುಖ್ಯವಾದ ವಿಷಯ ಎಂದು ಚಿದಂಬರಂ ನುಡಿದರು.  ಅದೊಂದು ಕಾಲವಿತ್ತು. ಆಗ ಭಾರತದಲ್ಲಿ ಕಾಂಗ್ರೆಸ್ ಸವಾಲೇ ಇಲ್ಲದ ಪಕ್ಷವಾಗಿತ್ತು. ಆದರೆ ಯಾವುದೇ ರಾಷ್ಟ್ರದಲ್ಲಿ ಆಗುವಂತೆ ನಮ್ಮಲ್ಲೂ ಬದಲಾವಣೆಗಳಾಗಿವೆ. ಈಗ ಹೆಚ್ಚು ರಾಜಕೀಯ ಪಕ್ಷಗಳು ಬಂದಿದ್ದು ಮಹತ್ವದ ಪಾತ್ರ ವಹಿಸುತ್ತಿವೆ. ಹೆಚ್ಚು ಪ್ರಾದೇಶಿಕ ಪಕ್ಷಗಳೂ ಬಂದಿವೆ ಎಂದು ಬೆಂಗಳೂರಿನಲ್ಲಿ ’ಶಕ್ತಿ ಯೋಜನೆಯನ್ನು ಉದ್ಘಾಟಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ನುಡಿದರು. ಇಂದು ರಾಷ್ಟ್ರಮಟ್ಟದಲ್ಲಿ ಇರುವ ಎರಡೇ ಪಕ್ಷಗಳಿವೆ. ಒಂದು ಕಾಂಗ್ರೆಸ್ ಮತ್ತು ಇನ್ನೊಂದು ಬಿಜೆಪಿ. ಬಿಜೆಪಿಯು ನಮ್ಮನ್ನು ಮೂರ್ಖರನ್ನಾಗಿ ಮಾಡಲು ಬಿಡಬೇಡಿ. ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸುತ್ತೇವೆ ಎಂಬ ಬಿಜೆಪಿಯ ಪ್ರಚಾರಕ್ಕೆ ಮೋಸಹೋಗಬೇಡಿ. ಅದು ಆಗುವುದೇ ಇಲ್ಲ ಎಂದು ಚಿದಂಬರಂ ಹೇಳಿದರು. ಕೆಲವೊಮ್ಮೆ ಪಕ್ಷವು ಪ್ರಬಲವಾಗಿ ಕಾಣಿಸುತ್ತಿರುತ್ತದೆ. ಕೆಲವೊಮ್ಮೆ ಅಷ್ಟೊಂದು ಪ್ರಬಲವಾಗಿ ಕಾಣುವುದಿಲ್ಲ. ಇವು ಬದಲಾಗುತ್ತಿರುತ್ತವೆ. ಗುಜರಾತಿನಲ್ಲಿ ಚುನಾವಣೆಯಲ್ಲಿ ಸೋತೆವು ಎಂದ ಮಾತ್ರಕ್ಕೆ ನಾವು ಆ ರಾಜ್ಯದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದೇವೆ ಎಂದಲ್ಲ. ನಾವು ಗುಜರಾತಿನಲ್ಲಿ ಅಸ್ತಿತ್ವದಲ್ಲಿ ಇದ್ದೇವೆ. ಅಧಿಕಾರ ಸ್ವಲ್ಪದರಲ್ಲಿ ತಪ್ಪಿತು ಅಷ್ಟೆ ಎಂದು ಮಾಜಿ ಕೇಂದ್ರ ವಿತ್ತ ಸಚಿವ ನುಡಿದರು.  ಕರ್ನಾಟಕದಲ್ಲಿ ಕಾಂಗ್ರೆಸ್ ಅಸ್ತಿತ್ವವು ಬಿಜೆಪಿಗಿಂತ ಪ್ರಬಲವಾಗಿದೆ. ಪಕ್ಷವು ಶೇಕಡಾ ೩೮ರಷ್ಟು ಮತ ಗಳಿಸಿದ್ದರೆ, ಬಿಜೆಪಿಗೆ ಸಿಕ್ಕಿರುವುದು ಶೇಕಡಾ ೩೬ರಷ್ಟು ಮತಗಳು ಮಾತ್ರ. ಮತಗಳ ಪ್ರಮಾಣದಲ್ಲಿ ನಮಗೆ ಶೇಕಡಾ ೨ರಷ್ಟು ಹೆಚ್ಚು ಇತ್ತು. ಆದರೆ ನಮಗೆ ೨೪ ಸ್ಥಾನಗಳ ಕೊರತೆಯಾಯಿತು. ಕರಾವಳಿ ಕರ್ನಾಟಕದಲ್ಲಿ ಬಿಜೆಪಿಯ ಮತಪಾಲು ಶೇಕಡಾ ೫೦ನ್ನು ಮೀರಿದರೆ ಹಳೆ ಮೈಸೂರಿನಲ್ಲಿ ಶೇಕಡಾ ೧೭ರಷ್ಟು ಕುಸಿಯಿತು ಎಂಬುದು ವಿಶ್ಲೇಷಣೆಗಳಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ವೋಟಿನ ಪ್ರಮಾಣ ಕೆಲವು ಕಡೆಗಳಲ್ಲಿ ಹೆಚ್ಚಾಗಬಹುದು, ಕೆಲವು ಕಡೆ ಕಡಿಮೆಯಾಗಬಹುದು. ಆದರೆ ಇದು ಸ್ಥಾನಗಳಲ್ಲಿ ದೊಡ್ಡ ವ್ಯತ್ಯಾಸವನ್ನು ಮಾಡಬಹುದು ಎಂದು ನುಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಹೆಚ್ಚು ಕಡಿಮೆ ಏಕರೂಪದಲ್ಲಿದೆ ಎಂದು ಹೇಳಿದರು.  ಪ್ರತಿ ಮತಗಟ್ಟೆ, ಗ್ರಾಮ, ಬ್ಲಾಕ್, ಪಟ್ಟಣ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್‍ಯಕರ್ತರನ್ನು ಸಂಪರ್ಕಕ್ಕೆ ತರುವ ಮೂಲಕ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಗುರಿಯೊಂದಿಗೆ ಕರ್ನಾಟಕದಲ್ಲಿ ’ಶಕ್ತಿ ಯೋಜನೆಯನ್ನು ಚಿದಂಬರಂ ಉದ್ಘಾಟಿಸಿದರು.  ತಮ್ಮ ಮತದಾರ ಚೀಟಿಯ ನಂಬರ್ ಸಹಿತವಾಗಿ ಎಸ್ ಎಂ ಎಸ್ ಕಳುಹಿಸುವ ಮೂಲಕ ಪಕ್ಷ ಕಾರ್ಯಕರ್ತರು ಯೋಜನೆಯಲ್ಲಿ ತಮ್ಮ ಹೆಸರು ನೋಂದಾಯಿಸಬಹುದು. ’ಶಕ್ತಿ ಯೋಜನೆಯು ಬೂತ್ ಮಟ್ಟದ ಕಾರ್‍ಯಕರ್ತರನ್ನು ವಿವಿಧ ವಿಷಯಗಳಲ್ಲಿ ಸ್ಥಳೀಯ ನಾಯಕತ್ವದ ಜೊತೆಗೆ ಸಂಪರ್ಕದಲ್ಲಿ ಇರುವಂತೆ ಮಾಡುತ್ತದೆ.  ಯೋಜನೆಯಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು ನೋಂದಣಿ ಮಾಡಲು ಆಗಸ್ಟ್ ೧೫ರ ಗಡುವು ನಿಗದಿ ಪಡಿಸಿದ ಚಿದಂಬರಂ, ಬೃಹತ್ ಪ್ರಮಾಣದಲ್ಲಿ ನೋಂದಣಿ ಇಂದಿನಿಂದಲೇ ಆರಂಭವಾಗಬೇಕು ಮತ್ತು ಆಗಸ್ಟು ೧೫ರ ಹೊತ್ತಿಗೆ ಫಲಿತಾಂಶ ಕಾಣಬೇಕು ಎಂದು ಹೇಳಿದರು.  ಶಕ್ತಿ ಯೋಜನೆಯು ಕಾಂಗ್ರೆಸ್ ಸದಸ್ಯರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುತ್ತಾ ಸಾಗಲಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಸಂಸದೀಯ ಚುನಾವಣೆಗಾಗಿ ಪ್ರಬಲ ತಳಮಟ್ಟದ ಪಡೆ ಸಿದ್ಧವಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಚಿದಂಬರಂ ಹೇಳಿದರು.

2018: ಲಕ್ನೋ:  ಮುಂದಿನ ಮಹಾಚುನಾವಣೆಗಾಗಿ ಮೈತ್ರಿ ಮತ್ತು ಸೀಟು ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಮಾಜವಾದಿ ಪಕ್ಷದ (ಎಸ್ ಪಿ) ರಾಷ್ಟ್ರೀಯ ಕಾರ್‍ಯಕಾರಿಣಿಯು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ನೀಡಿತು.  ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಲಕ್ನೋದಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ’೨೦೧೯ರ ಲೋಕಸಭಾ ಚುನಾವಣೆಗಾಗಿ ಮೈತ್ರಿ ಮತ್ತು ಸೀಟು ಹಂಚಿಕೆ ಮಾಡುವ ಬಗೆಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ನೀಡುವ ಮುಖ್ಯ ನಿರ್ಧಾರವನ್ನು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತೆಗೆದು ಕೊಳ್ಳಲಾಯಿತು ಎಂದು ಹೇಳಿದರು.  ಚುನಾವಣೆಗಳು ಬ್ಯಾಲೆಟ್ ಪೇಪರ್ ಗಳ ಮೂಲಕ ನಡೆಯಬೇಕು, ವಿದ್ಯುನ್ಮಾನ ಯಂತ್ರಗಳ (ಇವಿಎಂ) ಮೂಲಕ ಅಲ್ಲ ಎಂಬ ಅಭಿಪ್ರಾಯವನ್ನು ಕಾರ್‍ಯಕಾರಿಣಿ ವ್ಯಕ್ತಪಡಿಸಿತು ಎಂದು ಅವರು ನುಡಿದರು. ಸಮಾಜವಾದಿ ಪಕ್ಷದ ಬೇಡಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ’ಸಮಾಜವಾದಿ ಪಕ್ಷದ ಬೇಡಿಕೆಯು ಅದರ ಅಂಜಿಕೆ ಮತ್ತು ಭ್ರಮನಿರಸನವನ್ನು ಪ್ರತಿಫಲಿಸಿದೆ ಎಂದು ಹೇಳಿದೆ. ‘ಚುನಾವಣೆಗೆ ಮೊದಲೇ ಸಮಾಜವಾದಿ ಪಕ್ಷವು ಸೋಲನ್ನು ಅಂಗೀಕರಿಸಿದಂತೆ ಕಾಣುತ್ತದೆ ಎಂದು ಬಿಜೆಪಿ ವಕ್ತಾರ ಶಲಭ್ ಮಣಿ ತ್ರಿಪಾಠಿ ಹೇಳಿದರು.  ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ವಿವರಿಸುವಂತೆ ಕೇಳಿದಾಗ ರಾಮ್ ಗೋಪಾಲ್ ಅವರು ’ನಾನು ನಿರ್ಣಯಗಳ ಬಗ್ಗೆ ಹೇಳುತ್ತಿದ್ದೇನೆ, ಚರ್ಚೆಯ ಬಗ್ಗೆ ಅಲ್ಲ ಎಂದು ಸಮಜಾಯಿಷಿ ನೀಡಿದರು.  ಆಜಂ ಖಾನ್ ಅವರಂತಹ ಕೆಲವು ನಾಯಕರು ಸಭೆಗೆ ಗೈರುಹಾಜರಾದ ಬಗ್ಗೆ ಕೇಳಲಾದ ಪ್ರಶ್ನೆಗೆ ’ಎಲ್ಲರೂ ಹಾಜರಿರುವ ಅಗತ್ಯ ಇದೆಯೇ? ಶೇಕಡಾ ೯೦ರಷ್ಟು ಸದಸ್ಯರು ಹಾಜರಿದ್ದರು. ಪಕ್ಷಾಧ್ಯಕ್ಷ ಅಖಿಲೇಶ್ ಯಾದವ್ ಅವರೂ ಹಾಜರಿದ್ದರು ಎಂದು ರಾಮ್ ಗೋಪಾಲ್ ಹೇಳಿದರು.  ಬ್ಯಾಲೆಟ್ ಪೇಪರ್ ಗಳ ಮೂಲಕ ಚುನಾವಣೆ ನಡೆಯಬೇಕು ಎಂಬ ಬೇಡಿಕೆಯನ್ನು ಚುನಾವಣಾ ಆಯೋಗ ಒಪ್ಪದೇ ಇದ್ದಲ್ಲಿ ಪಕ್ಷವು ಏನು ಮಾಡಲಿದೆ ಎಂಬ ಪ್ರಶ್ನೆಗೆ ’ಎಸ್ ಪಿ ನಾಯಕರು ಚುನಾವಣಾ ಆಯೋಗದ ಬಾಗಿಲಲ್ಲಿ ಧರಣಿ ನಡೆಸುವರು ಮತ್ತು ಸತ್ಯಾಗ್ರಹ ಹೂಡುವರು ಎಂದು ರಾಮ್ ಗೋಪಾಲ್ ಉತ್ತರಿಸಿದರು.  ‘ನೀವು ಸಂಭಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆಗೆ ’ನಾನು ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವುದು ಪಕ್ಷಕ್ಕೆ ಬಿಟ್ಟ ವಿಚಾರ. ಅದು ನಿರ್ದೇಶಿಸಿದರೆ ನಾನು ಸ್ಪರ್ಧಿಸುವೆ, ಇಲ್ಲದಿದ್ದರೆ ಇಲ್ಲ ಎಂದು ರಾಮ್ ಗೋಪಾಲ್ ನುಡಿದರು.  ಮೈತ್ರಿಕೂಟ ರಚನೆಯಾದರೆ ಯಾರು ಅದನ್ನು ಮುನ್ನಡೆಸುವರು ಎಂಬ ಪ್ರಶ್ನೆಗೆ ’ಕೇಂದ್ರದಲ್ಲಿ ಇರುವ ಸರ್ಕಾರವನ್ನು ೧೭ ಪಕ್ಷಗಳು ನಡೆಸುತ್ತಿವೆ. ಅವರ ನಾಯಕ ಒಬ್ಬರೇ (ನರೇಂದ್ರ) ಮೋದಿ. ಪ್ರತಿಯೊಂದು ಪಕ್ಷಕ್ಕೂ ತನ್ನ ನಾಯಕನಿರುತ್ತಾನೆ ಎಂದು ರಾಮ್ ಗೋಪಾಲ್ ಹೇಳಿದರು.  ಅಖಿಲೇಶ್ ಯಾದವ್ ಜೊತೆಗೆ ಘರ್ಷಿಸುತ್ತಿರುವ ಚಿಕ್ಕಪ್ಪ ಶಿವಪಾಲ್ ಯಾದವ್ ಬಗ್ಗೆ ಚರ್ಚಿಸಲಾಯಿತೇ ಎಂಬ ಪ್ರಶ್ನೆಗೆ ಎಸ್ ಪಿ ನಾಯಕ ನಕಾರಾತ್ಮಕ ಉತ್ತರ ನೀಡಿದರು.  ಮೋದಿಯವರು ಉತ್ತರ ಪ್ರದೇಶಕ್ಕೆ ಆಗಾಗ ಬರುತ್ತಿರುವ ಬಗ್ಗೆ ಗಮನ ಸೆಳೆದಾಗ ’ಇದು ಆರಂಭವಷ್ಟೇ. ಚುನಾವಣೆಗಳು ಹತ್ತಿರ ಬಂದಂತೆ ಅವರು ಇಲ್ಲಿಗೆ ಪ್ರತಿದಿನವೂ ಬರಬೇಕಾಗುತ್ತದೆ ಎಂದು ರಾಮ್ ಗೋಪಾಲ್ ನುಡಿದರು.


2016: ಕೋಲ್ಕತ: ಖ್ಯಾತ ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಹಾಶ್ವೇತಾ ದೇವಿ(90)  ಈದಿನ ಮಧ್ಯಾಹ್ನ ನಿಧನರಾದರು. 90 ವರ್ಷ ಪ್ರಾಯದ ಮಹಾಶ್ವೇತಾದೇವಿ ಅವರು ಜುಲೈ 23ರಂದು ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರುವಯೋಸಹಜವಾದ ಸಮಸ್ಯೆಗಳಿಂದಲು ಬಳಲುತ್ತಿದ್ದ ಮಹಾಶ್ವೇತಾ ದೇವಿ ಅವರಿಗೆ ಕೋಲ್ಕತದ ಬೆಲ್ಲೆ ವ್ಯೂ ಕ್ಲಿನಿಕ್ ಆಸ್ಪತ್ರೆಯಲ್ಲಿ ಕಳೆದೆರಡು ತಿಂಗಳಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು. ಜುಲೈ 23ರಂದು ತೀವ್ರ ಹೃದಯಾಘಾತಕ್ಕೊಳಗಾದ ಬಳಿಕ ಸಾಕಷ್ಟು ಸೊರಗಿದ್ದರು. ಅವರ ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದರು. ಸಾಧನೆಯ ಹಾದಿ: ಹೊತ್ತಿ ಉರಿಯುತ್ತಿರುವ ಈಶಾನ್ಯ ಭಾರತದ ಆತ್ಮಸಾಕ್ಷಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಮಹಾಶ್ವೇತಾ ದೇವಿ ಅವರದ್ದು. ಇಂಗ್ಲಿಷ್ ಸಾಹಿತ್ಯದ ಮಾಜಿ ಉಪನ್ಯಾಸಕಿಯಾದ ಮಹಾಶ್ವೇತಾ ದೇವಿ, ಜನಸಾಮಾನ್ಯರ ಬದುಕನ್ನು ತೀರಾ ಹತ್ತಿರದಿಂದ ಕಂಡವರು. ಪಶ್ಚಿಮ ಬಂಗಾಳದ ಪುರುಲಿಯಾ ಹಾಗೂ ಬಂಕುರಾ ಜಿಲ್ಲೆಗಳಲ್ಲಿ ಖೇರಿಯಾ-ಶಬರ್ ಬುಡಕಟ್ಟು ಜನರೊಂದಿಗೇ ಒಬ್ಬರಾಗಿ ಸಾಮಾಜಿಕ ಕಳಕಳಿಯಿಂದ ದುಡಿದವರು. ಬುಡಕಟ್ಟು ಜನರ ಏಳಿಗೆಗಾಗಿ ಸುಮಾರು 25 ವರ್ಷಗಳ ಕಾಲ ದುಡಿದಿರುವ ಮಹಾಶ್ವೇತಾದೇವಿ ಸಾಹಿತ್ಯ ಅಕಾಡಮಿ, ಜ್ಞಾನಪೀಠ ಪ್ರಶಸ್ತಿ, ಮ್ಯಾಗ್ಸೆಸೆ ಸೇರಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕಾದಂಬರಿಗಾರ್ತಿ. ಮಹಾಶ್ವೇತಾ ದೇವಿ ಅವರು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 1926 ಜನವರಿಯಲ್ಲಿ ಜನಿಸಿ, ಸಾಮಾಜಿಕವಾಗಿ ಸೂಕ್ಷ್ಮ ಸಂವೇದಿಯಾಗಿ ಬೆಳೆದರು. ತಮ್ಮ 17ನೇ ವರ್ಷದಲ್ಲೇ ಬಂಗಾಳದ ಬರಗಾಲ ಪರಿಸ್ಥಿತಿಯಲ್ಲಿ (1943) ಪರಿಹಾರ ಕಾರ್ಯಕ್ಕೆ ದುಡಿದು ಶಹಬ್ಬಾಸ್ ಎನಿಸಿಕೊಂಡಿದ್ದರು.

2016: ಮುಂಬೈ: 2006 ಔರಂಗಾಬಾದ್ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಬಂಧಿತರಾಗಿದ್ದ ಸೈಯದ್ ಜಬಿವುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಸಹಿತ 11 ಮಂದಿ ಆರೋಪಿಗಳು ತಪ್ಪಿತಸ್ತರು ಎಂದು ಇಲ್ಲಿನ ಸೆಷನ್ಸ್ ಕೋರ್ಟ್ ತೀರ್ಪು ನೀಡಿತು. ಭಾರತೀಯ ದಂಡ ಸಂಹಿತೆ ಮತ್ತು ಅಕ್ರಮ ಚಟುವಟಿಕೆ ನಿಗ್ರಹ ಕಾಯ್ದೆ (ಯುಎಪಿಎ) ವಿಧಿಗಳ ಅಡಿಯಲ್ಲಿ ಆರೋಪಿಗಳನ್ನು ತಪ್ಪಿತಸ್ತರು ಎಂದು ಘೋಷಿಸಿದ ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಗ್ರಹ ಕಾಯ್ದೆ ವಿಶೇಷ ನ್ಯಾಯಾಲಯವು 8 ಮಂದಿಯನ್ನು ಖುಲಾಸೆ ಮಾಡಿತು. ನ್ಯಾಯಾಲಯವು ಒಬ್ಬ ಆರೋಪಿಗೆ ಕ್ಷಮೆ ನೀಡಿತು. 2006 ರಲ್ಲಿ ಶಂಕಿತ ಉಗ್ರರು ಪ್ರಯಾಣಿಸುತ್ತಿದ್ದ ಕಾರನ್ನು ಬೆನ್ನಟ್ಟಿ ಔರಂಗಾಬಾದ್ ಬಳಿ ತಡೆದ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳವು ಕಾರಿನಿಂದ 30 ಕೆ ಜಿ ಆರ್ ಡಿ ಎಕ್ಸ್, 10 ಕೆ-47 ಗನ್ ಜತೆಗೆ 3,200 ಗುಂಡುಗಳನ್ನು ವಶಪಡಿಸಿಕೊಂಡಿತ್ತು. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸಜ್ಜಾಗಿದ್ದ ತಂಡವನ್ನು ಪೊಲೀಸರು ನಿಷ್ಕ್ರೀಯಗೊಳಿಸಿದ್ದರುಇನ್ನೊಂದು ಕಾರಿನಲ್ಲಿದ್ದ ಮುಖ್ಯ ಆರೋಪಿ ಅಬು ಜುಂದಾಲ್ ಎಟಿಎಸ್ ಕೈಗೆ ಸಿಗದೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದ. 2013 ರಲ್ಲಿ ಎಟಿಎಸ್ಗೆ ಸೆರೆಸಿಕ್ಕ ಜುಂದಾಲ್ ಭಾರತದಲ್ಲಿರುವ ಉಗ್ರರ ನೆಲೆ ತೋರಿಸಿದ್ದ, ಅಲ್ಲಿಂದ 13 ಕೆ ಜಿ ಆರ್ಡಿಎಕ್ಸ್ ಸಹಿತ 1200 ಗುಂಡುಗಳು ಹಾಗೂ 50 ಗ್ರೆನೇಡ್ಗಳನ್ನು ಜಪ್ತಿ ಮಾಡಲಾಗಿತ್ತು.. ದಾಳಿಯಲ್ಲಿ ಒಟ್ಟು 22 ಜನರನ್ನು ಎಟಿಎಸ್ ಬಂಧಿಸಿತ್ತು. 26/11 ಮುಂಬೈ ತಾಜ್ ಹೋಟೆಲ್ ದಾಳಿಯಲ್ಲೂ ಅಬು ಜುಂದಾಲ್ ಕೈವಾಡವಿತ್ತು. ಮಹಾರಾಷ್ಟ್ರ ನ್ಯಾಯಾಲಯದ ತೀರ್ಪಿನ ವಿರುದ್ಧ ಆರೋಪಿಗಳ ಪೈಕಿ ಒಬ್ಬ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. 2009 ರಲ್ಲಿ ಸುಪ್ರೀಂ ಕೋರ್ಟ್ ಮನವಿ ತಳ್ಳಿಹಾಕಿತ್ತು. 2013 ರಲ್ಲಿ ಎಟಿಎಸ್ ಜುಂದಾಲ್ ಹಾಗೂ ಇನ್ನಿತರರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು.

2016: ಬೆಂಗಳೂರು: ಉತ್ತರ ಕರ್ನಾಟಕ ಜನರ ದಾಹ ತಣಿಸುವ ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಮಹದಾಯಿಯಿಂದ 7 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ಹರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಾಧಿಕರಣ (ಟ್ರಿಬ್ಯೂನಲ್) ಹಿಂದಿನ ದಿನ ತಳ್ಳಿ ಹಾಕಿದ ಹಿನ್ನೆಲೆಯಲ್ಲಿ ಈದಿನ ಕರ್ನಾಟಕದಾದ್ಯಂತ ಪ್ರತಿಭಟನೆ ಭುಗಿಲೆದ್ದಿತು. ಈ ಹಿನ್ನೆಲೆಯಲ್ಲಿ ಕರೆ ನೀಡಲಾಗಿದ್ದ ಉತ್ತರ ಕರ್ನಾಟಕ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಗದಗ, ಹುಬ್ಬಳ್ಳಿ-ಧಾರವಾಡಗಳಲ್ಲಿ ವ್ಯಾಪಕ ಹಿಂಸಾಚಾರ ನಡೆಯಿತು. ನರಗುಂದದಲ್ಲಿ ಇಬ್ಬರು ರೈತರು ವಿಷ ಸೇವಿಸಲು ಯತ್ನಿಸಿ ಅಸ್ವಸ್ಥರಾದರೆ, ನವಲಗುಂದದಲ್ಲಿ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಕರ್ಫ್ಯೂ ಘೋಷಿಸಲಾಯಿತು. 
2008: ಟೊರಾಂಟೊದಲ್ಲಿನ ಶಿಯಾಮಕ್ ದಾವರ್ ಶಿಕ್ಷಣ ಸಂಸ್ಥೆಯ ನೃತ್ಯ ನಿರ್ದೇಶಕಿ ಗುಜರಾತ್ ಮೂಲದ ರುಪಾಲ್ ಲಖಾನಿ (21) `ಮಿಸ್ ಭಾರತ-ಕೆನಡಾ'ಆಗಿ ಆಯ್ಕೆಯಾದರು.

2007: ಭಾರತೀಯ ವೈದ್ಯ ಮೊಹಮ್ಮದ್ ಹನೀಫ್ ಮೇಲಿದ್ದ ಭಯೋತ್ಪಾದನೆ ಆರೋಪವನ್ನು ಆಸ್ಟ್ರೇಲಿಯಾ ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ಹನೀಫ್ ಅವರು ಈದಿನ ಮಧ್ಯರಾತ್ರಿ 12.25ಕ್ಕೆ (ಭಾರತೀಯ ಕಾಲಮಾನ ರಾತ್ರಿ 7.55) ಆಸ್ಟ್ರೇಲಿಯದ ಬ್ರಿಸ್ಬೇನ್ ವಿಮಾನ ನಿಲ್ದಾಣದಿಂದ ಥಾಯ್ ಏರ್ ವೇಸ್ ವಿಮಾನದಲ್ಲಿ ಬ್ಯಾಂಕಾಕ್ ಮೂಲಕ ಬೆಂಗಳೂರಿಗೆ ಹೊರಟರು. ಆಸ್ಟ್ರೇಲಿಯ ಸರ್ಕಾರವು ಹನೀಫ್ ಗೆ ದೇಶದಿಂದ ಹೊರಗೆ ತೆರಳಲು ಅವಕಾಶ ನೀಡಿತು. ಆದರೆ ಉದ್ಯೋಗದ ವೀಸಾ ನೀಡಲು ನಿರಾಕರಿಸಿತು.

2007: ನೈಸ್ ಸಂಸ್ಥೆಯನ್ನು ಕಿತ್ತೊಗೆದು, ಬೆಂಗಳೂರು-ಮೈಸೂರು ಹೆದ್ದಾರಿ ಕಾರಿಡಾರ್ ಯೋಜನೆ ಗುತ್ತಿಗೆಯನ್ನು 25000 ಕೋಟಿ ಡಾಲರ್ ವ್ಯವಹಾರದ `ಗ್ಲೋಬಲ್ ಇನ್ ಫ್ರಾಸ್ಟ್ರಕ್ಚರ್ ಕನಸೋರ್ಟಿಯಮ್' (ಜಿಐಸಿ)ಗೆ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ನ್ಯಾಯಾಲಯದ ಅನುಮತಿ ಕೋರಿತು. ಆದರೆ ಯಾವುದೇ ಕಾರಣಕ್ಕೂ ಬೆಂಗಳೂರು- ಮೈಸೂರು ಕಾರಿಡಾರ್ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ, ಸರ್ಕಾರದ ವಿರುದ್ಧ ಕಾನೂನು ಸಮರ ಮುಂದುವರೆಯುವುದು ಎಂದು ನೈಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಸ್ಪಷ್ಟಪಡಿಸಿದರು. ಅಮೆರಿಕಾದ ಇಂಡಸ್ ಕ್ಯಾಪಿಟಲ್, ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್ ಫಂಡ್, ಅವೆನ್ಯೂ ಕ್ಯಾಪಿಟಲ್ ಮತ್ತು ಐಆರ್ಇಒ ಫಂಡ್ ಹಾಗೂ ಮುಂಬೈನ ಸ್ಕಿಲ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿ ಮತ್ತು ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗಳನ್ನು ಒಳಗೊಂಡಿರುವ ಜಿಐಸಿ ಮುಂಬೈ ಮತ್ತು ಬೆಂಗಳೂರಿನ ಕೋರಮಂಗಲದಲ್ಲಿ ಕಚೇರಿ ಹೊಂದಿತ್ತು. ಜಿಐಸಿ ನೀಡಿರುವ ಪ್ರಸ್ತಾವಕ್ಕೆ ಲೇಖಿರಾಜ್ ಜೈನ್ ಎಂಬವರು ಸಹಿ ಹಾಕಿದ್ದರು. ಮೂಲಚೌಕಟ್ಟು ಒಪ್ಪಂದವನ್ನು ಮೀರಿ ಸುಮಾರು 30000 ಕೋಟಿ ರೂಪಾಯಿ ಬೆಲೆಬಾಳುವ 2289 ಎಕರೆ ಭೂಮಿಯನ್ನು ನೈಸ್ ಸಂಸ್ಥೆ ಸ್ವಾಧೀನಪಡಿಸಿಕೊಂಡಿದೆ, ಇದಕ್ಕಾಗಿ ಸರ್ಕಾರದ ಕೆಲವು ಅಧಿಕಾರಿಗಳನ್ನು ಕೈವಶಮಾಡಿಕೊಂಡು ದಾಖಲೆಗಳನ್ನು ಕೂಡಾ ತಿರುಚಿದೆ ಎನ್ನುವುದು ರಾಜ್ಯಸರ್ಕಾರದ ಪ್ರಮುಖ ಆರೋಪ. ಇದೇ ಆರೋಪದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎರಡು ವರ್ಷಗಳ ಹಿಂದೆ ರಾಜ್ಯ ಹೈಕೋರ್ಟ್ ವಜಾ ಮಾಡಿ ಯೋಜನೆಗೆ ಹಸಿರು ನಿಶಾನೆ ತೋರಿತ್ತು. ನ್ಯಾಯಾಲಯಕ್ಕೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ ಹಾಗೂ ದಾಖಲೆಗಳನ್ನು ಮರೆಮಾಚಿದ ಆರೋಪದ ಮೇಲೆ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾ ಮತ್ತು ಇನ್ನೊಬ್ಬ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಒಂದು ವರ್ಷದ ನಂತರ ಸುಪ್ರೀಂಕೋರ್ಟ್ ಕೂಡಾ ರಾಜ್ಯ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಯೋಜನೆಗೆ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ದೂರು `ಕುಲ್ಲಕ ಮತ್ತು ದುರುದ್ದೇಶದಿಂದ ಕೂಡಿದೆ' ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಪೀಠ ಬಿಎಂಐಸಿ ಯೋಜನೆ ಜಾರಿಗೊಳಿಸುತ್ತಿರುವ ನೈಸ್ ಸಂಸ್ಥೆಗೆ ವೆಚ್ಚದ ರೂಪದಲ್ಲಿ ನಾಲ್ಕು ವಾರದಲ್ಲಿ 5 ಲಕ್ಷ ರೂ. ನೀಡಬೇಕು ಎಂದು ಆದೇಶ ನೀಡಿತ್ತು. ಇದರ ನಂತರ ಬಿಎಂಐಸಿ ಯೋಜನೆ ಬಗ್ಗೆ ವಿಚಾರಣೆ ನಡೆಸಲು ರಾಜ್ಯಸರ್ಕಾರ ಬಿ.ಸಿ.ಪಟೇಲ್ ತನಿಖಾ ಆಯೋಗ ರಚಿಸಿದಾಗಲೂ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ತನಿಖೆ ನಡೆಸುವುದಿಲ್ಲ ಎಂದು ಮೊದಲು ಒಪ್ಪಿಕೊಂಡರೂ ರಾಜ್ಯ ಸರ್ಕಾರ ಹತ್ತುತಿಂಗಳ ನಂತರ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿ ತನಿಖಾ ಆಯೋಗ ರಚನೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

2007: ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯ ಮುದಿಗೊಂಡ ಗ್ರಾಮದಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ಮೃತರಾದರು. ಎಡಪಕ್ಷಗಳು ಕರೆ ನೀಡಿದ್ದ ಆಂಧ್ರಪ್ರದೇಶ ಬಂದ್ ಹಿಂಸಾಚಾರಕ್ಕೆ ತಿರುಗಿದಾಗ ಈ ಘಟನೆ ಸಂಭವಿಸಿತು.

2007: ಭಾರತ-ಶ್ರೀಲಂಕಾವನ್ನು ಸಂಪರ್ಕಿಸುವ `ರಾಮರ್ ಸೇತು ಅಥವಾ ಆಡಮ್ ಬ್ರಿಡ್ಜ್ ಮಾನವ ನಿರ್ಮಿತ ರಚನೆ ಅಲ್ಲ ಎಂದು ಬಾಹ್ಯಾಕಾಶದಿಂದ ತೆಗೆದಿರುವ ಭೂಮಿಯ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಭಾಗ ಅರ್ ್ಥ ವೆಬ್ ಹೇಳಿರುವುದಾಗಿ ಚೆನ್ನೈಯ ಸೇತು ಸಮುದ್ರಂ ಕಾರ್ಪೊರೇಷನ್ ಪ್ರಕಟಿಸಿತು. ಕಾರ್ಪೊರೇಷನ್ ಎರಡು ದಿನದ ಹಿಂದೆ ನಾಸಾಗೆ ಇ ಮೇಲ್ ಮೂಲಕ `ರಾಮರ್ ಸೇತುವೆ ಮಾನವ ನಿರ್ಮಿತವೇ?' ಎಂಬ ಪ್ರಶ್ನೆಯನ್ನು ಕಳುಹಿಸಿತ್ತು. ಅದಕ್ಕೆ ಉತ್ತರಿಸಿರುವ ನಾಸಾದ ಅರ್ಥ್ ವೆಬ್ ವಿಭಾಗ, `ಇದು, ಸಾವಿರಾರು ವರ್ಷಗಳಿಂದ ಅಲೆಗಳಿಂದಾಗಿ ನಿರ್ಮಾಣವಾದ ಮರಳಿನ ಸ್ವಾಭಾವಿಕ ರಚನೆ. ಹಾಗಾಗಿ ಇದು ಮಾನವ ನಿರ್ಮಿತ ಅಲ್ಲ ಎಂದು ಸ್ಪಷ್ಟ ಪಡಿಸಿದೆ' ಎಂದು ಕಾರ್ಪೊರೇಷನ್ ಹೇಳಿತು. ನಾಸಾ ಕಳುಹಿಸಿದ ಉತ್ತರವನ್ನು ಪತ್ರಿಕಾಗೋಷ್ಠಿಯಲ್ಲಿ ಸೇತು ಸಮುದ್ರಂ ಕಾರ್ಪೊರೇಷನ್ ಮತ್ತು ತೂತ್ತುಕುಡಿ ಬಂದರು ಮಂಡಳಿ ಅಧ್ಯಕ್ಷ ಎನ್. ರಘುಪತಿ ವಿವರಿಸಿದರು. ಸೇತು ಸಮುದ್ರಂ ಜಲಮಾರ್ಗ ಯೋಜನೆ ಶೇ 50 ರಷ್ಟು ಪೂರ್ಣಗೊಂಡಿದೆ. ಈವರೆಗೆ 231 ಲಕ್ಷ ಘನ ಅಡಿ ಹೂಳು ಎತ್ತಲಾಗಿದೆ ಎಂದು ರಘುಪತಿ ಹೇಳಿದರು.

2007: ಭಾರತದ ಪೆಂಟ್ಯಾಲ ಹರಿಕೃಷ್ಣ ಅವರು ಕೆನಡಾದ ಮ್ಯಾಂಟ್ರಿಯಲ್ನಲ್ಲಿ ನಡೆದ ಮಾಂಟ್ರಿಯಲ್ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ನ ಎಂಟನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದು, ಪೂರ್ಣ ಪಾಯಿಂಟ್ ಸಂಗ್ರಹಿಸಿದರು.

2007: ಭಾರತದಿಂದ ಕೋಳಿಗಳನ್ನು ಆಮದು ಮಾಡಿಕೊಳ್ಳದಂತೆ ಶ್ರೀಲಂಕಾ ನಿಷೇಧ ಹೇರಿತು. ಮಣಿಪುರ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಪಕ್ಷಿಜ್ವರ (ಕೋಳಿಜ್ವರ) ಕಾಣಿಸಿಕೊಂಡಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಭಾರತದ ಕೋಳಿ ಸೇರಿದಂತೆ ಯಾವುದೇ ಪಕ್ಷಿಗಳನ್ನು ಆಮದು ಮಾಡಿಕೊಳ್ಳದಂತೆ ನಿಷೇಧ ವಿಧಿಸಿತು.

2007: ಭಾರತ ಹಾಗೂ ಭೂತಾನ್ ರೂ 3,500 ಕೋಟಿಗಳ ವೆಚ್ಚದ ಮಹತ್ವಾಕಾಂಕ್ಷಿ ಜಲ ವಿದ್ಯುತ್ ಉತ್ಪಾದನಾ ಯೋಜನೆಯ ಒಪ್ಪಂದಕ್ಕೆ ಈದಿನ ಭೂತಾನಿನ ಥಿಂಪುವಿನಲ್ಲಿ ಸಹಿ ಹಾಕುವ ಮೂಲಕ ಉಭಯ ದೇಶಗಳು ಆರ್ಥಿಕ ಸಹಕಾರದಲ್ಲಿ ಹೊಸ ಹೆಜ್ಜೆ ಇಟ್ಟವು. 1095 ಮೆಗಾವಾಟ್ ಸಾಮರ್ಥ್ಯದ ಜಲ ವಿದ್ಯುತ್ ಉತ್ಪಾದನಾ ಯೋಜನೆಯ ಒಪ್ಪಂದಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಮತ್ತು ಭೂತಾನ್ ವಿದೇಶಾಂಗ ಸಚಿವ ಲೊಂಪೊ ಕಾಂಡು ವಾಂಗ್ ಚುಕ್ ಅವರು ಸಹಿ ಹಾಕಿದರು. ಭಾರತದ ಸಹಕಾರದೊಂದಿಗೆ ಭೂತಾನಿನಲ್ಲಿ ನಿರ್ಮಾಣವಾಗುವ ಅತಿದೊಡ್ಡ ಜಲವಿದ್ಯುತ್ ಯೋಜನೆ ಇದು. ಭಾರತದ ಸಹಕಾರದೊಂದಿಗೆ ಭೂತಾನ್ ಕೈಗೆತ್ತಿಕೊಂಡ ಹಲವು ಜಲ ವಿದ್ಯುತ್ ಯೋಜನೆಗಳಲ್ಲಿ ಚುಖಾ, ಹರಿಚಾ, ಢಾಲಾ ಹಾಗೂ ಪುನತ್ ಸಂಘಚುವಾನ್ ಯೋಜನೆಗಳು ಮುಖ್ಯವಾದವು. ಈ ಯೋಜನೆಗಳಲ್ಲಿ ಭಾರತ 5,000 ಕೋಟಿ ರೂ. ಬಂಡವಾಳ ಹೂಡಿದೆ.

2007: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಹಿನ್ನೆಲೆ ಗಾಯನಕ್ಕೆ ಕಾಲಿರಿಸಿ ಐವತ್ತು ವರ್ಷ ಸಂದ ಸಂದರ್ಭದಲ್ಲಿ ರಮ್ಯ ಕಲ್ಚರಲ್ ಅಕಾಡೆಮಿ ಬೆಂಗಳೂರಿನ ಶಿಕ್ಷಕರ ಭವನದಲ್ಲಿ `ಗೌರವಾಭಿನಂದನೆ' ಕಾರ್ಯಕ್ರಮ ಏರ್ಪಡಿಸಿತ್ತು. ಜಾನಕಿ ಅವರು ಸಮಾರಂಭದಲ್ಲಿ ಹೃದಯತುಂಬಿ ಹಾಡಿದರು. ಈ ಸನ್ಮಾನ ಸಮಾರಂಭದಲ್ಲಿ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್, ಸಂಗೀತ ನಿರ್ದೇಶಕರಾದ ಜಯಗೋಪಾಲನ್, ರಾಜನ್, ಹಿರಿಯ ನಟಿಯರಾದ ಹರಿಣಿ, ಜಯಂತಿ, ಡಾ. ಬಿ. ಸರೋಜಾದೇವಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಪಾಲ್ಗೊಂಡಿದ್ದರು. `ಸುರಭಿ ಪ್ರಕಾಶನ' ಹೊರತಂದ ಆರ್. ಶ್ರೀನಾಥ್ ಅವರ `ನಾದ ದೇವತೆ-ಎಸ್. ಜಾನಕಿ' ಪುಸ್ತಕವನ್ನು ಇದೇ ಸಂದರ್ಭದಲ್ಲಿ ಹಿರಿಯ ನಟಿ ಜಯಂತಿ ಬಿಡುಗಡೆ ಮಾಡಿದರು.

2006: ಪಾಂಡಿಚೇರಿಯನ್ನು `ಪುದುಚೇರಿ' ಎಂಬುದಾಗಿ ನಾಮಕರಣ ಮಾಡುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಮಂಡಿಸಿದರು.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನೂತನ ಮೀಸಲಾತಿ ನೀತಿ ರೂಪಿಸುವ ಸಂಬಂಧ ರಚಿಸಲಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತು.

2006: ದೀರ್ಘ ಕಾಲದ ಸಮರದ ಬಳಿಕ ಕಡೆಗೂ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರು ರಂಜನಾ ಝಾ ಅವರನ್ನು ತಮ್ಮ ಪತ್ನಿ ಎಂಬುದಾಗಿ ಬಿಹಾರಿನ ಮಹಿಳಾ ಆಯೋಗದ ಮುಂದೆ ಅಂಗೀಕರಿಸಿದರು. ರಂಜನಾ ಅವರನ್ನು ತಮ್ಮ ಮೊದಲ ಪತ್ನಿ ಎಂಬುದಾಗಿ ಒಪ್ಪಿಕೊಂಡು ಅವರಿಗೆ ಪತ್ನಿಯ ಸ್ಥಾನಮಾನ ನೀಡಲು ಉದಿತ್ ಅವರು ಒಪ್ಪಿದ್ದಾರೆ ಎಂದು ಆಯೋಗದ ಅಧ್ಯಕ್ಷೆ ಮಂಜು ಪ್ರಕಾಶ್ ಈದಿನ ಪ್ರಕಟಿಸಿದರು.

1943: ಇಟಲಿಯ ಫ್ಯಾಸಿಸ್ಟ್ ಸರ್ವಾಧಿಕಾರಿ ಬೆನಿಟೊ ಮುಸೋಲಿನಿ ಈದಿನ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ. 10 ವರ್ಷಗಳ ಕಾಲ ನಿರಂಕುಶ ಆಡಳಿತ ನಡೆಸಿದ ಈತ 1936-1939ರ ನಡುವಣ ಸ್ಪಾನಿಷ್ ಜತೆಗಿನ ಯುದ್ಧದಲ್ಲಿ ಹಿಟ್ಲರ್ ಜೊತೆಗೆ ಕೈಜೋಡಿಸಿದ.

1935: ಪ್ರಾಧ್ಯಾಪಕ, ಸಾಹಿತಿ ವಾಮನ ಬೇಂದ್ರೆ ಅವರು ವರಕವಿ ದ.ರಾ. ಬೇಂದ್ರೆ- ಲಕ್ಷ್ಮೀಬಾಯಿ ದಂಪತಿಯ ಪುತ್ರನಾಗಿ ಹಾವೇರಿ ಜಿಲ್ಲೆಯ (ಹಿಂದಿನ ಧಾರವಾಡ ಜಿಲ್ಲೆ) ರಾಣೆಬೆನ್ನೂರಿನಲ್ಲಿ ಜನಿಸಿದರು. ಶಾಲೆಯಲ್ಲಿ ಇದ್ದಾಗಲೇ ಬರವಣಿಗೆ ಪ್ರಾರಂಭಿಸಿದ ಅವರಿಗೆ ಸಾಹಿತ್ಯ ರಚನೆ ತಂದೆಯಿಂದ ಬಂದ ಬಳುವಳಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ವಾಮನ ಬೇಂದ್ರೆ ಅವರು ಪ್ರಬಂಧ, ಕವನ, ನಾಟಕ, ಅನುವಾದ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದವರು.

1909: ರಾಜಕಾರಣಿ ಬ್ರಹ್ಮಾನಂದರೆಡ್ಡಿ ಜನನ.

No comments:

Post a Comment