Friday, September 21, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 21

ಇಂದಿನ ಇತಿಹಾಸ History Today ಸೆಪ್ಟೆಂಬರ್  21

2018: ತಿರುವಂತಪುರಂ: ೨೦೧೪-೨೦೧೬ರ ನಡುವಣ ಅವಧಿಯಲ್ಲಿ ಕೇರಳದ ಕ್ರೈಸ್ತ ಸನ್ಯಾಸಿನಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಜಲಂಧರ್ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಕೇರಳ ಪೊಲೀಸರು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದವು. ಇದರೊಂದಿಗೆ ಕ್ರೈಸ್ತ ಸನ್ಯಾಸಿನಿಯ ಮೇಲಿನ ಲೈಂಗಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾದ ಮೊತ್ತ ಮೊದಲ ಕ್ಯಾಥೋಲಿಕ್ ಬಿಷಪ್ ಎಂಬ ಕುಖ್ಯಾತಿಗೆ ಮುಲಕ್ಕಲ್ ಪಾತ್ರರಾದರು. ಕೋಚಿಯಲ್ಲಿ ಮಧ್ಯಾಹ್ನ ಮುಲಕ್ಕಲ್ ಅವರನ್ನು ಬಂಧಿಸಲಾಯಿತು.  ಪೊಲೀಸರು ಕಳೆದ ಮೂರು ದಿನಗಳಿಂದ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸುತ್ತಿದ್ದರು. ಜಲಂಧರ್ ಡಯೋಸಿಸ್ ಮುಖ್ಯಸ್ಥರಾಗಿದ್ದ ಫ್ರಾಂಕೋ ಮುಲಕ್ಕಲ್ ಅವರು ತಮ್ಮ ಅಧಿಕೃತ ಕೇರಳ ಭೇಟಿಗಳ ಸಂದರ್ಭಗಳಲ್ಲಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರಗಳನ್ನು ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಫ್ರಾಂಕೋ ಅವರನ್ನು ಡಯೋಸಿಸ್ ಕರ್ತವ್ಯದಿಂದ ವ್ಯಾಟಿಕನ್ ತಾತ್ಕಾಲಿಕವಾಗಿ ಬಿಡುಗಡೆ ಮಾಡಿತ್ತು. ಮುಲಕ್ಕಲ್ ಬಂಧನಕ್ಕೆ ಮುನ್ನ ಪೊಲೀಸರು ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಕ್ರೈಸ್ತ ಸನ್ಯಾಸಿನಿಯಿಂದ ಹೊಸದಾಗಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಮೂರು ದಿನಗಳ ಕಾಲ ತೀವ್ರವಾಗಿ ಪ್ರಶ್ನಿಸಿದ ಬಳಿಕ ಬಿಷಪ್ ನೀಡಿದ ತಾಳಮೇಳವಿಲ್ಲದ ಹೇಳಿಕೆಗಳನ್ನು ಅನುಸರಿಸಿ ಪೊಲೀಸರು ಮುಲಕ್ಕಲ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಯಿತು. ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದ ಮುಲಕ್ಕಲ್ ಅವರು ತಾವು ೨೦೧೪ರ ಮೇ ೫ರಂದು ಕುರವಿಲಂಗಡದ ಕಾನ್ವೆಂಟಿನಲ್ಲಿ ವಾಸ್ತವ್ಯ ಹೂಡಿರಲಿಲ್ಲ ಎಂದು ಪ್ರತಿಪಾದಿಸಿದ್ದರು. ಆದಿನ ತನ್ನ ಮೇಲೆ ಮೊದಲ ಬಾರಿಗೆ ಅತ್ಯಾಚಾರ ನಡೆದಿತ್ತು ಎಂದು ಕ್ರೈಸ್ತ ಸನ್ಯಾಸಿನಿ ಆಪಾದಿಸಿದ್ದರು.  ತಾವು ಕಾನ್ವೆಂಟಿಗೆ ಕೇವಲ ಭೇಟಿ ನೀಡಿದ್ದು ಮುಥಲಕೋಡಂನ ಬೇರೊಂದು ಕಾನ್ವೆಂಟಿನಲ್ಲಿ ವಾಸ್ತವ್ಯ ಹೂಡಿದ್ದುದಾಗಿ ಮುಲಕ್ಕಲ್ ಪ್ರತಿಪಾದಿಸಿದ್ದರುಪೊಲೀಸರು ಮಾಹಿತಿಯ ಬಗ್ಗೆ ಮುಲಕ್ಕಲ್ ಚಾಲಕನ ಬಳಿ ಮತ್ತು ಅವರ ಭೇಟಿಯನ್ನು ರಿಜಿಸ್ಟರಿನಲ್ಲಿ ದಾಖಲಿಸಿದ್ದ ಇನ್ನೊಬ್ಬ ಕ್ರೈಸ್ತ ಸನ್ಯಾಸಿನಿ ಬಳಿ ಪರಿಶೀಲಿಸಿದಾಗ ಬಿಷಪ್ ಮತ್ತು ಅವರ ಚಾಲಕ ಆದಿನ ಕುರವಿಲಂಗಡದ ಕಾನ್ವೆಂಟಿನಲ್ಲೇ ವಾಸ್ತವ್ಯ ಹೂಡಿದ್ದುದು ಬೆಳಕಿಗೆ ಬಂದಿತ್ತುಬಿಷಪ್ ಅವರ ಹೇಳಿಕೆಯನ್ನು ಮುಥಲಕೋಡಂ ಕಾನ್ವೆಂಟಿನ ಇನ್ನೊಬ್ಬ ಕ್ರೈಸ್ತ ಸನ್ಯಾಸಿನಿ ಪ್ರಶ್ನಿಸಿದ್ದರು. ಬಿಷಪ್ ಮುಥಲಕೋಡ ಕಾನ್ವೆಂಟಿಗೆ ಭೇಟಿ ನೀಡಿದ್ದುದನ್ನು ಆಕೆ ನಿರಾಕರಿಸಿದ್ದರುಮೊಬೈಲ್ ಮಾಹಿತಿ: ಬಿಷಪ್ ಪ್ರತಿಪಾದನೆಯ ಪರಿಶೀಲನೆ ಸಲುವಾಗಿ ಪೊಲೀಸರು ಬಿಷಪ್ ಅವರ ಮೊಬೈಲ್ ಟವರ್ ಲೊಕೇಶನ್ ಮಾಹಿತಿಯನ್ನು ಸಂಗ್ರಹಿಸಿದ್ದರು. ಮಾಹಿತಿಯು ಬಿಷಪ್ ಅವರು ೨೦೧೪ರ ಮೇ ೫ರ ರಾತ್ರಿ ಅತ್ಯಾಚಾರ ಸಂತ್ರಸ್ಥೆ ಸನ್ಯಾಸಿನಿ ಇದ್ದ ಕಾನ್ವೆಂಟಿನಲ್ಲೇ ಬಿಷಪ್ ಹಾಜರಿದ್ದ ಬಗೆಗೆ ಸುಳಿವು ನೀಡಿತ್ತು. ವಿಚಾರಣೆ ಕಾಲದಲ್ಲಿ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಸ್ಪಷ್ಟ ಪಡಿಸುವಂತೆ ಪೊಲೀಸರು ಹೇಳಿದಾಗ ಬಿಷಪ್ ಸುಮ್ಮನಿದ್ದರು ಎಂದು ಮೂಲಗಳು ತಿಳಿಸಿದವು. ತಮ್ಮ ಮೇಲಿನ ಆರೋಪವನ್ನು ನಿರಾಕರಿಸಲು ಬಿಷಪ್ ಮುಲಕ್ಕಲ್ ಅವರು ೨೦೧೪ರ ಮೇ ೬ರಂದು ನಡೆದ ಕಾರ್ಯಕ್ರಮ ಒಂದರ ಡಿವಿಡಿಯನ್ನು ಒದಗಿಸಿದ್ದರು. ತಾನು ಅತ್ಯಾಚಾರ ಎಸಗಿದ್ದರೆ ಮರುದಿನದ ಕಾರ್ಯಕ್ರಮದಲ್ಲಿ ಆಕೆ ತನ್ನ ಜೊತೆಗೆ ಇದ್ದುದು ಏಕೆ ಎಂದು ಬಿಷಪ್ ಪ್ರಶ್ನಿಸಿದ್ದರುಪೊಲೀಸರು ಡಿವಿಡಿಯನ್ನು ಪರಿಶೀಲಿಸಿದಾಗ ವಿಡಿಯೋವನ್ನು ಎಡಿಟ್ ಮಾಡಿದ್ದುದು ಮತ್ತು ಆದಿನ ಕಾರ್ಯಕ್ರಮ ನಡೆದ ವೇಳೆಯಲ್ಲಿ ಸನ್ಯಾಸಿನಿ ಅತ್ಯಂತ ಭ್ರಮನಿರಸನಗೊಂಡಿದ್ದುದು ಮತ್ತು ಖಿನ್ನತೆಗೆ  ಒಳಗಾಗಿದ್ದುದು ಬೆಳಕಿಗೆ ಬಂದಿತ್ತು. ಸನ್ಯಾಸಿನಿಯ ಬಂಧುಗಳೂ ವಿಚಾರವನ್ನು ಪೊಲೀಸರಿಗೆ ದೃಢ ಪಡಿಸಿದ್ದರು. ತಾವು ಪ್ರಶ್ನಿಸಿದಾಗ ಸನ್ಯಾಸಿನಿ ತನಗೆ ಹಿಂದಿನ ರಾತ್ರಿ ತೀವ್ರ ತಲೆಶೂಲೆ ಇತ್ತೆಂದು ಹೇಳಿದ್ದುದಾಗಿ ಸನ್ಯಾಸಿನಿಯ ಬಂಧುಗಳು ಪೊಲೀಸರಿಗೆ ತಿಳಿಸಿದ್ದರು.

2018: ನವದೆಹಲಿ: ರಫೇಲ್ ಯುದ್ಧ ವಿಮಾನಕ್ಕೆ ಸಂಬಂಧಿಸಿದ ೫೮,೦೦೦ ಕೋಟಿ ರೂಪಾಯಿಗಳ ವ್ಯವಹಾರದಲ್ಲಿ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನು ಡಸಾಲ್ಟ್ ಅವಿಯೇಶನ್ ಸಂಸ್ಥೆಗೆ ಪಾಲುದಾರನಾಗಿ ತೆಗೆದುಕೊಳ್ಳುವಂತೆ ಭಾರತ ಸರ್ಕಾರ ಸೂಚಿಸಿತ್ತು, ಫ್ರಾನ್ಸಿಗೆ ಬೇರೆ ಆಯ್ಕೆ ಇರಲಿಲ್ಲ ಎಂಬುದಾಗಿ ಫ್ರಾನ್ಸಿನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಅವರನ್ನು ಉಲ್ಲೇಖಿಸಿ ಫೆಂಚ್ ಮಾಧ್ಯಮವೊಂದು ವರದಿ ಮಾಡಿತು. ಭಾರತ ಸರ್ಕಾರದ ನಿಲುವಿಗೆ ವ್ಯತಿರಿಕ್ತವಾದ ಹೊಲ್ಲಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯದ ವಕ್ತಾರರುರಫೇಲ್ ವ್ಯವಹಾರದಲ್ಲಿ ಆಫ್ಸೆಟ್ ಪಾಲುದಾರನಾಗಿ ನಿರ್ದಿಷ್ಟ ಸಂಸ್ಥೆಯೊಂದನ್ನು ಭಾರತ ಸರ್ಕಾರ ಸೂಚಿಸಿತ್ತು ಎಂಬುದಾಗಿ ಫ್ರಾನ್ಸಿನ ಮಾಜಿ ಅಧ್ಯಕ್ಷ ಹೊಲ್ಲಾಂಡೆ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ವರದಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.  ‘ಈ ವಾಣಿಜ್ಯ ವ್ಯವಹಾರದ ನಿರ್ಧಾರದಲ್ಲಿ ಭಾರತ ಸರ್ಕಾರಕ್ಕಾಗಲೀ ಫ್ರೆಂಚ್ ಸರ್ಕಾರಕ್ಕಾಗಲೀ ಯಾವುದೇ ಪಾತ್ರ ಇರಲಿಲ್ಲ ಎಂಬುದಾಗಿ ಪುನರುಚ್ಚರಿಸಲಾಗಿತ್ತು ಎಂದು ಅವರು ನುಡಿದರು. ರಫೇಲ್ ನಿರ್ಮಿಸುವ ಡಸಾಲ್ಟ್ ಅವಿಯೇಶನ್ ಕಂಪೆನಿಯು ರಿಲಯನ್ಸ್ ಡಿಫೆನ್ಸ್ ನ್ನು ವ್ಯವಹಾರದ ಆಫ್ಸೆಟ್ ಬದ್ಧತೆಗಳ ಈಡೇರಿಕೆಗಾಗಿ ತನ್ನ ಪಾಲುದಾರನಾಗಿ ಆಯ್ಕೆ ಮಾಡಿಕೊಂಡಿದೆ. ಆಫ್ಸೆಟ್ ಪಾಲುದಾರನ ಆಯ್ಕೆಯಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ಸರ್ಕಾರ ಪ್ರತಿಪಾದಿಸುತ್ತಲೇ ಬಂದಿತ್ತು. ವಿವಾದಾತ್ಮಕವಾದ ಬಹುಕೋಟಿ ಡಾಲರ್ ವ್ಯವಹಾರವಾಗಿರುವ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಲ್ಲಾಂಡೆ ಅವರು ನೀಡಿದ್ದಾರೆ ಎನ್ನಲಾಗಿರುವ ಹೇಳಿಕೆ ಭಾರತದಲ್ಲಿ ಈಗಾಗಲೇ ಹೊತ್ತಿ ಉರಿಯುತ್ತಿರುವ ರಾಜಕೀಯ ದಳ್ಳುರಿಗೆ ತುಪ್ಪ  ಎರೆಯಿತು.  ‘ನಾವು ಇದರಲ್ಲಿ ಏನೂ ಹೇಳುವಂತಿರಲಿಲ್ಲ. ಭಾರತ ಸರ್ಕಾರವು ಸೇವಾ ಸಮೂಹವನ್ನು ಪ್ರಸ್ತಾಪಿಸಿತ್ತು ಮತ್ತು ಡಸಾಲ್ಟ್ ಅವಿಯೇಶನ್ ಕಂಪೆನಿಯು (ಅನಿಲ್) ಅಂಬಾನಿ ಸಮೂಹದ ಜೊತೆಗೆ ಮಾತುಕತೆ ನಡೆಸಿತು. ನಮಗೆ ಯಾವುದೇ ಆಯ್ಕೆ ಇರಲಿಲ್ಲ. ನಮಗೆ ನೀಡಲಾದ ಪಾಲುದಾರನನ್ನು ನಾವು ತೆಗೆದುಕೊಂಡೆವು ಎಂಬುದಾಗಿ ಹೊಲ್ಲಂಡೆಯನ್ನು ಉಲ್ಲೇಖಿಸಿದ ಫ್ರೆಂಚ್ ಮಾಧ್ಯಮ ವರದಿ ಹೇಳಿತು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ವರದಿಯನ್ನು ಉಲ್ಲೇಖಿಸಿ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ತಮ್ಮ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿವೆ. ಕಾಂಗ್ರೆಸ್ ವಕ್ತಾರ ಮನಿಶ್ ತಿವಾರಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದರು. ೨೦೧೫ರ ಏಪ್ರಿಲ್ ೧೦ರಂದು ಆಗಿನ ಫ್ರೆಂಚ್ ಅಧ್ಯಕ್ಷ ಹೊಲ್ಲಾಂಡೆ ಜೊತೆಗೆ ಮಾತುಕತೆ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ೩೬ ರಫೇಲ್ ಯುದ್ಧ ವಿಮಾನ ಖರೀದಿಯ ವಿಚಾರವನ್ನು ಪ್ಯಾರಿಸ್ನಲ್ಲಿ ಪ್ರಕಟಿಸಿದ್ದರು. ಏರೋಸ್ಪೇಸ್ ರಂಗದಲ್ಲಿ ಅನುಭವವೇ ಇಲ್ಲದ ಖಾಸಗಿ ಸಂಸ್ಥೆಗೆ ಲಾಭಮಾಡಿಕೊಡುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಏರೋನಾಟಿಕ್ಸ್ ಲಿಮಿಟೆಡ್ ಬದಲಿಗೆ ಸರ್ಕಾರವು ರಿಲಯನ್ಸ ಡಿಫೆನ್ಸ್ ನ್ನು ಆಯ್ಕೆ ಮಾಡಿಕೊಂಡಿದೆ ಎಂದು ವಿಪಕ್ಷಗಳು ಆಪಾದಿಸಿದ್ದವು.

2018: ನವದೆಹಲಿ: ಸರ್ಜಿಕಲ್ ದಾಳಿಗಳ ವಾರ್ಷಿಕೋತ್ಸವ ಆಚರಿಸಲು ಸೂಚಿಸಿ ವಿಶ್ವ ವಿದ್ಯಾಲಯ ಅನುದಾನ ಆಯೋಗವು ವಿಶ್ವ ವಿದ್ಯಾಲಯಗಳಿಗೆ  ಪತ್ರ ಬರೆದದ್ದುರಾಷ್ಟ್ರಭಕ್ತಿಯೇ ವಿನಃ ರಾಜಕೀಯವಲ್ಲ, ಅದನ್ನು ಸಂಘಟಿಸುವುದು ಸಂಸ್ಥೆಗಳಿಗೆ ಕಡ್ಡಾಯವೂ ಅಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಇಲ್ಲಿ ಹೇಳಿದರು. ಸರ್ಜಿಕಲ್ ದಾಳಿಗಳನ್ನು ಸರ್ಕಾರವು ರಾಜಕೀಯಗೊಳಿಸುತ್ತಿದೆ ಎಂಬುದಾಗಿ ವಿರೋಧ ಪಕ್ಷಗಳು ಆಪಾದಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕರಾಗಿರುವ ಜಾವಡೇಕರ್ ಸ್ಪಷ್ಟನೆ ನೀಡಿ ಆರೋಪವನ್ನುಸಂಪೂರ್ಣ  ಹಾಸ್ಯಾಸ್ಪದ ಮತ್ತು ಅಬದ್ಧ ಎಂದು ನುಡಿದರುಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಕೈಗೊಂಡ ನಿರ್ಣಯಗಳಿಗಿಂತ ಆಡಳಿತಾರೂಢ ಬಿಜೆಪಿ ನೀಡಿರುವ ಸಲಹೆಗಗಳು ಭಿನ್ನವಾಗಿವೆ. ಬಿಜೆಪಿಯು ಕಾರ್ಯಕ್ರಮ ನಡೆಸುವಂತೆ ಸಲಹೆಯನ್ನು ಮಾತ್ರವೇ ನೀಡಿದೆ. ಆದರೆ ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದಾಗ ಕೈಗೊಂಡ ನಿರ್ಣಯಗಳ ಪಾಲನೆಯನ್ನು ಕಡ್ಡಾಯಗೊಳಿಸಿತ್ತು ಎಂದು ಸಚಿವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.  ‘ವಿಶ್ವ ವಿದ್ಯಾಲಯಗಳಿಗೆ ಕೊಟ್ಟದ್ದು ಸಲಹಾತ್ಮಕ ಸೂಚನೆ ಮಾತ್ರ ನಿರ್ದೇಶನವಲ್ಲ ಎಂದು ಅವರು ನುಡಿದರು.  ‘ರಾಜಕೀಯ ಎಲ್ಲಿದೆ? ಇದು ರಾಜಕೀಯವಲ್ಲ, ದೇಶಭಕ್ತಿ ಎಂದು ನುಡಿದ ಅವರು ವಿದ್ಯಾರ್ಥಿಗಳಿಗೆ ಸರ್ಜಿಕಲ್ ದಾಳಿಗಳು, ಸೇನೆ ಮತ್ತು ಸೈನಿಕರು ನಡೆಸುವ ನಾಗರಿಕ ಕೆಲಸಗಳ ಬಗ್ಗೆ ತಿಳಿಸುವ ಅಗತ್ಯ ಇದೆ ಎಂದು ಜಾವಡೇಕರ್ ಹೇಳಿದರು೨೦೧೬ರ ಸೆಪ್ಟೆಂಬರ್ ೨೯ರಂದು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಗಡಿದಾಟಿ ಪ್ರವೇಶಿಸಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆಯ ಸರ್ಜಿಕಲ್ ದಾಳಿಗಳ ಎರಡನೇ ವರ್ಷಾಚರಣೆಯನ್ನು ನಡೆಸುಂತೆ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳಿಗೆ ಸಲಹೆಗಳನ್ನು ಮಾಡಲಾಗಿದೆ ಎಂದು ಅವರು ಪ್ರತಿಪಾದಿಸಿದರು. ಸಂದರ್ಭದಲ್ಲಿ ನ್ಯಾಷನಲ್ ಕೆಡೆಟ್ ಕೋರ್ (ಎನ್ ಸಿಸಿ) ಪರೇಡ್ ಮತ್ತು ನಿವೃತ್ತ ಸೇನಾ ಅಧಿಕಾರಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಏಕೆ ಅದನ್ನು ಆಚರಿಸಲಿಲ್ಲ ಎಂಬ ಪ್ರಶ್ನೆಗೆಒಳ್ಳೆಯ ಸಲಹೆಯನ್ನು ಯಾವಾಗ ಬೇಕಿದ್ದರೂ ಅನುಷ್ಠಾನಗೊಳಿಸಬಹುದು ಎಂದು ಸಚಿವರು ಉತ್ತರಿಸಿದರು. ಸೆಪ್ಟೆಂಬರ್ ೨೯ರಂದುಸರ್ಜಿಕಲ್ ದಾಳಿ ದಿನ ಆಚರಿಸುವಂತೆ ವಿಶ್ವ ವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಗುರುವಾರ ವಿಶ್ವ ವಿದ್ಯಾಲಯಗಳು ಮತ್ತು ದೇಶಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು.

2018: ಲಕ್ನೋ: ರಾಜಸ್ಥಾನದಲ್ಲಿ ಮುಂಬರುವ ಚುನಾವಣೆಗಳಿಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸೆಣಸಲು ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಭಾರತದ ಕಮ್ಯೂನಿಸ್ಟ್ ಪಕ್ಷದ (ಸಿಪಿಐ) ಜೊತೆ ಸೇರಿ ತೃತೀಯ ರಂಗ ರಚಿಸುವ ಸನ್ನಾಹಕ್ಕೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕೈ ಹಾಕಿದರು. ೨೦೧೯ರ ಮಹಾಚುನಾವಣೆಗೆ ಮುನ್ನ ವಿರೋಧ ಪಕ್ಷಗಳ ಏಕತೆಗೆ ಇದು ಮೂರನೇ ಹೊಡೆತವಾಗುವ ಸಾಧ್ಯತೆ ಇದೆ. ಮಾಯಾವತಿ ಅವರು ಗುರುವಾರ ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಬಂಡಾಯಗಾರ ಅಜಿತ್ ಜೋಗಿ ಜೊತೆಗೆ ಚುನಾವಣಾ ಮೈತ್ರಿಯನ್ನು ಪ್ರಕಟಿಸುವ ಮೂಲಕ ಕಾಂಗ್ರೆಸ್ಸನ್ನು ಸುಸ್ತು ಹೊಡೆಸಿದ್ದರು. ಪರಿಣಾಮವಾಗಿ ಕಾಂಗ್ರೆಸ್ ತಾನು ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣಾ ಸಮರ ನಡೆಸುವುದಾಗಿ ಹೇಳಬೇಕಾಗಿ ಬಂದಿತ್ತು.  ಮಧ್ಯ ಪ್ರದೇಶದಲ್ಲಿ ಕೂಡಾ ಮಾಯಾವತಿ ಅವರ ಏಕಪಕ್ಷೀಯವಾಗಿ ೨೨ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಮೂಲಕ ಕಾಂಗೆಸ್ ಪಕ್ಷಕ್ಕೆ ಆಘಾತ ಉಂಟು ಮಾಡಿದ್ದರು. ಮೈತ್ರಿಕೂಟ ರಚನೆಯ ಸಲುವಾಗಿ ತಮ್ಮ ಪಕ್ಷವು ಮಾಯಾವತಿ ಅವರ ಜೊತೆಗೆ ಸಂಪರ್ಕದಲ್ಲಿದೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ, ರಾಜಸ್ಥಾನದಲ್ಲಿ ಪಕ್ಷ ವ್ಯವಹಾರಗಳ ಹೊಣೆ ಹೊತ್ತಿರುವ ಅತುಲ್ ಕುಮಾರ್ ಅಂಜನ್ ಕೂಡಾ ದೃಢ ಪಡಿಸಿದರು. ‘ಎಡಪಕ್ಷಗಳು ಜೆಡಿ(ಎಸ್) ಮತ್ತು ಎಸ್ಪಿ ಜೊತೆ ಸೇರಿ ತೃತೀಯ ರಂಗವನ್ನು ರಚಿಸಿದೆ. ಬಿಎಸ್ಪಿ ಕೂಡಾ ನಮ್ಮ ಜೊತೆ ಸೇರಿದರೆ ನಮಗೆ ಅತ್ಯಂತ ಸಂತೋಷ. ನಾವು ಬಿಎಸ್ಪಿ ನಾಯಕತ್ವದ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ಅಂಜನ್ ನುಡಿದರು. ಆದರೆ ಬಿಎಸ್ಪಿಯು ಕಾಂಗ್ರೆಸ್ ಜೊತೆಗೂ ಸೀಟು ಹಂಚಿಕೆ ಸಲುವಾಗಿ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದರು. ಏನಿದ್ದರೂ, ಛತ್ತೀಸ್ ಗಢದಲ್ಲಿ ಮೈತ್ರಿಗೆ ಯತ್ನಿಸುತ್ತಿರುವ ಕಾಂಗ್ರೆಸ್ ರಾಜಸ್ಥಾನದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಲು ಅಷ್ಟೇನೂ ಕಾತರದಿಂದಿಲ್ಲ. ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸಚಿನ್ ಪೈಲಟ್ ಅವರು ರಾಜ್ಯದಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಬಹುದೆಂಬ ವಿಶ್ವಾಸ ಹೊಂದಿದ್ದು, ಯಾವುದೇ ಪಕ್ಷದ ಜೊತೆಗೆ ಮೈತ್ರಿಗೆ ವಿರುದ್ಧವಾದ ನಿಲುವು ತಾಳಿದ್ದಾರೆ. ರಾಜಸ್ಥಾನವು ಪ್ರತಿ ಐದು ವರ್ಷಕ್ಕೊಮ್ಮೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಸರ್ಕಾರಗಳನ್ನು ಐದು ವರ್ಷಕ್ಕೊಮ್ಮೆ ಬದಲಾಯಿಸುವ ಇತಿಹಾಸವನ್ನು ಹೊಂದಿದೆಬಿಎಸ್ಪಿಯಲ್ಲಿನ ನಂಬಲರ್ಹ ಮೂಲಗಳು ಮಾಯಾವತಿ ಅವರು ಇನ್ನೂ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದು ಉಭಯ ಪಕ್ಷಗಳ ನಡುವಣ ಮೈತ್ರಿ ಸಾಧ್ಯತೆಯನ್ನು ಸಾರಾ ಸಗಟಾಗಿ ತಳ್ಳಿಹಾಕಿಲ್ಲ ಎಂದು ತಿಳಿಸಿದವು. ಇದರಿಂದಾಗಿ ಎಡಪಕ್ಷ, ಎಸ್ಪಿ ಜೊತೆಗಿನ ಮೈತ್ರಿ ಹೇಳಿಕೆಯು ಹೆಚ್ಚು ಸ್ಥಾನಗಳಿಗಾಗಿ ಬಿಎಸ್ಪಿ ನಡೆಸುವ ಚೌಕಾಶಿ ತಂತ್ರವಾಗಿರಬಹುದು ಎಂದು ರಾಜಕೀಯ ವಲಯಗಳು ಭಾವಿಸಿವೆನಾವು ಕಾಂಗ್ರೆಸ್ ಮತ್ತು ಇತರ ಬಿಜೆಪಿಯೇತರ ಪಕ್ಷಗಳ ಜೊತೆಗೆ ಸಂಪರ್ಕದಲ್ಲಿದ್ದೇವೆ. ಏನಿದ್ದರೂ ರಾಜಸ್ಥಾನ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ ನಡೆಸುವ ಬಗ್ಗೆ ಕೂಡಾ ನಾವು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ ಎಂದು ಬಿಎಸ್ಪಿಯ ಹಿರಿಯ ಕಾರ್ಯಕರ್ತರೊಬ್ಬರು ತಿಳಿಸಿದರು. ಹಿಂದಿನ ಚುನಾವಣೆಗಳಲ್ಲಿ ಕೂಡಾ, ಬಿಎಸ್ಪಿಯು ರಾಜ್ಯದಲ್ಲಿ ಇತರ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹಿಂಜರಿದಿತ್ತು ಮತ್ತು ೨೦೧೩ರಲ್ಲಿ ೧೯೯ ಸ್ಥಾನಗಳಿಗೆ ಸ್ಪರ್ಧಿಸಿತ್ತು. ಅದು ಸ್ಥಾನಗಳನ್ನು ಗೆದ್ದು ಶೇಕಡಾ ೫ರಷ್ಟು ಮತಪಾಲನ್ನು ಗಳಿಸಿತ್ತು೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ವಿರೋಧೀ ಮಹಾಮೈತ್ರಿ ರಚನೆ ಕಾಂಗ್ರೆಸ್ಸಿಗೆ ಸುಲಭವಲ್ಲ ಎಂಬುದನ್ನು ಮೂರು ರಾಜ್ಯಗಳ ಬೆಳವಣಿಗೆಗಳು ತೋರಿಸುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಎಲ್ಲ ವಿಪಕ್ಷಗಳ ಏಕತೆಯ ಬದಲಿಗೆ ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ತೃತೀಯ ರಂಗ ರಚನೆಯತ್ತ ಗಾಳಿ ಬೀಸಬಹುದು ಎಂದು ಅವರು ಅಭಿಪ್ರಾಯ ಪಟ್ಟರು. ಹರಿಯಾಣದಲ್ಲೂ, ಬಿಎಸ್ಪಿಯು ಈಗಾಗಲೇ ಅಭಯ್ ಚೌತಾಲ ಅವರ ಇಂಡಿಯನ್ ನ್ಯಾಷನಲ್ ಲೋಕದಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಮಹಾ ಚುನಾವಣೆಯ ಬಳಿಕ ಬರುವುದಾದರೂ, ಐಎನ್ ಎಲ್ ಡಿ ಅಧ್ಯಕ್ಷರ ಜೊತೆ ಮಾಯಾವತಿ ಕಳೆದ ತಿಂಗಳು ಸಭೆ ನಡೆಸಿದ್ದು ೨೦೧೯ರ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಗಳಿಸಿತ್ತು. ಅತ್ಯಂತ ಪ್ರಮುಖ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಎರಡೂ ಪಕ್ಷಗಳು ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ಸನ್ನು ಸೇರಿಸಿಕೊಳ್ಳಲು ಉತ್ಸುಕವಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಎದುರು ನಿಲ್ಲಬಲ್ಲಂತಹ ಪ್ರಬಲ ದೊಡ್ಡ ಪಕ್ಷ ಕಾಂಗ್ರೆಸ್ ಅಲ್ಲ ಎಂಬುದು ಸಮಾಜವಾದಿ ಪಕ್ಷದ ಚಿಂತನೆಯಾಗಿದ್ದರೆ, ಇತರ ರಾಜ್ಯಗಳಲ್ಲಿ ಕಾಂಗ್ರೆsಸ್ ಉದಾರವಾಗಲು ಸಿದ್ಧವಿದ್ದರೆ ಮಾತ್ರ ಅದರ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲು ಬಿಎಸ್ಪಿ ಸಿದ್ಧವಾಗಿದೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೀರ್ಮಾನಿಸುವಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕಾಂಗ್ರೆಸ್ ಪ್ರಬಲವಾಗಿ ಮೂಡಿಬಂದರೆ ಅದು ಪಕ್ಷಕ್ಕೆ ಚೌಕಾಶಿಯ ಶಕ್ತಿಯನ್ನು ಒದಗಿಸಲಿದೆ ಮತ್ತು ಇತರ ಪಕ್ಷಗಳ ಜೊತೆಗೆ ಹೆಚ್ಚಿನ ಸ್ಥಾನಕ್ಕೆ ಆಗ್ರಹಿಸಬಹುದು. ಇತರ ಪಕ್ಷಗಳು ಅದನ್ನು ಬಯಸದೇ ಇರಬಹುದು. ಇಂತಹ ಚಿಂತನೆಗಳು ಬಿಜೆಪಿಗೆ ತತ್ ಕ್ಷಣಕ್ಕೆ ನಿರಾಳವಾಗಿ ಉಸಿರಾಡಲು ಅವಕಾಶ ನೀಡಬಹುದು.

2018: ನವದೆಹಲಿ: ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆ ಮಹಾಧಿವೇಶನ ಕಾಲದಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಮಾತುಕತೆ ನಡೆಸುವಂತೆ ಪಾಕಿಸ್ತಾನ ಮುಂದಿಟ್ಟ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ ಒಂದು ದಿನದ ಬಳಿಕ, ಜಮ್ಮು ಮತ್ತು ಕಾಶ್ಮೀರದಲಿ ಮೂವರು ವಿಶೇಷ ಅಧಿಕಾರಿಗಳನ್ನು ಅಪಹರಿಸಿಕೊಲೆಗೈಯಲಾಗಿರುವ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರ ಮಾತುಕತೆಯನ್ನು ಭಾರತ ರದ್ದು ಪಡಿಸಿತುಮೂವರು ಭದ್ರತಾ ಸಿಬ್ಬಂದಿಯನ್ನು ಪಾಕಿಸ್ತಾನಿ ಉಗ್ರಗಾಮಿಗಳು ಕ್ರೂರವಾಗಿ ಹತ್ಯೆ ಗೈದಿರುವುದು ಮತ್ತು ಭಯೋತ್ಪಾದಕರನ್ನು ವೈಭವೀಕರಿಸಿ ೨೦ ಅಂಚೆಚೀಟಿಗಳನ್ನು ನೆರೆಯರಾಷ್ಟ್ರ ಇತ್ತೀಚೆಗೆ ಬಿಡುಗಡೆ ಮಾಡಿರುವ ಘಟನೆಗಳು ಪಾಕಿಸ್ತಾನವು ತನ್ನ ಕಾರ್ಯಶೈಲಿಯನ್ನು ತಿದ್ದಿಕೊಂಡಿಲ್ಲ ಎಂಬುದನ್ನು ದೃಢ ಪಡಿಸಿದೆ ಎಂದು ಭಾರತ ಹೇಳಿತು.  ‘ಪಾಕಿಸ್ತಾನದ ನೂತನ ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಪತ್ರಗಳಲ್ಲಿ ಪ್ರತಿಫಲಿಸಿದ ಆಶಯಕ್ಕೆ ಸ್ಪಂದಿಸಿ ತಿಂಗಳು ನ್ಯೂಯಾರ್ಕ್ನಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಸುವ ಪಾಕಿಸ್ತಾನದ ಪ್ರಸ್ತಾವವನ್ನು ಒಪ್ಪಲು ನಿರ್ಧರಿಸಲಾಗಿತ್ತು. ಪತ್ರವು ಧನಾತ್ಮಕ ಬದಲಾವಣೆ ತರುವ ಬಗ್ಗೆ ಪಾಕಿಸ್ತಾನದ ಪ್ರಧಾನಿ ವ್ಯಕ್ತ ಪಡಿಸಿದ ಅಭಿಪ್ರಾಯ ಮತ್ತು ಶಾಂತಿಗಾಗಿ ಪರಸ್ಪರರ ಇಚ್ಛೆಯನ್ನು ವ್ಯಕ್ತ ಪಡಿಸಿತ್ತು. ಭಯೋತ್ಪಾದನೆ ಬಗ್ಗೆ ಕೂಡಾ ಮಾತುಕತೆ ನಡೆಸುವ ಉತ್ಸುಕತೆಯನ್ನೂ ಪ್ರಸ್ತಾಪ ವ್ಯಕ್ತ ಪಡಿಸಿತ್ತು  ‘ಆದರೆ ಹೊಸ ಆರಂಭಕ್ಕಾಗಿ ಮಾತುಕತೆ ನಡೆಸುವ ಪಾಕಿಸ್ತಾನದ ಪ್ರಸ್ತಾಪದ ಹಿಂದೆ ದುರುಳ ಕಾರ್ಯಸೂಚಿ ಇದ್ದುದು ಈಗ ಬೆಳಕಿಗೆ ಬಂದಿದೆ ಮತ್ತು ಪಾಕಿಸ್ತಾನದ ನೂತನ ಪ್ರಧಾನಿಯ ನೈಜ ಮುಖ ಅವರು ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಜಗತ್ತಿನ ಮುಂದೆ ಬಯಲಾಗಿದೆ. ಇಂತಹ ಪರಿಸರದಲ್ಲಿ ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದಕ್ಕೆ ಯಾವುದೇ ಅರ್ಥವಿಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದರುಇದಕ್ಕೆ ಮುನ್ನ ಈದಿನ, ಮೂವರು ಪೊಲೀಸ್ ವಿಶೇಷ ಅಧಿಕಾರಿಗಳನ್ನು ಶಂಕಿತ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿಗಳು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಅಪಹರಿಸಿ ಕ್ರೂರವಾಗಿ ಕೊಲೆಗೈದರು. ಸರ್ಕಾರಿ ಕೆಲಸ ಬಿಡಿ, ಇಲ್ಲವೇ ಸಾವನ್ನು ಎದುರಿಸಿ ಎಂದು ಉಗ್ರಗಾಮಿ ಸಂಘಟನೆ ಬೆದರಿಕೆ ಹಾಕಿದ ಕೆಲವೇ ದಿನಗಳ ಬಳಿಕ ಘಟನೆ ಘಟಿಸಿದೆ. ಘಟನೆಯು ವಿಶೇಷ ಪೊಲೀಸ್ ಅಧಿಕಾರಿಗಳಲ್ಲಿ ಭಯವನ್ನು ಹುಟ್ಟು ಹಾಕಿದ್ದು, ಹಲವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದೂ ವರದಿಗಳು ಹೇಳಿದ್ದವುಏನಿದ್ದರೂ, ರಾಜೀನಾಮೆ ವಿಚಾರ ಕೇವಲ ದುರುದ್ದೇಶದ ಪ್ರಚಾರ ಎಂದು ಸರ್ಕಾರ ದೂಷಿಸಿತು.  ವಿದೇಶಾಂಗ ಇಲಾಖೆ ವಕ್ತಾರರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರ ಭೇಟಿಯನ್ನು ದೃಢ ಪಡಿಸಿದ್ದರು. ಭೇಟಿಯನ್ನುಸಂಭಾಷಣೆ ಎಂಬುದಾಗಿ ಪರಿಗಣಿಸಬಾರದು ಎಂದೂ ಅವರು ಹೇಳಿದ್ದರು. ‘ಇದು ಪ್ರಸ್ತಾಪವನ್ನು ಒಪ್ಪಿದ ಪ್ರಕಾರ ನಡೆಯುವ ಸಭೆ. ಇದನ್ನು ಸಂಭಾಷಣೆ ಎಂಬುದಾಗಿ ಗೊಂದಲ ಮಾಡಿಕೊಳ್ಳಬಾರದು. ಪಾಕಿಸ್ತಾನದ ಮನವಿ ಮೇರೆಗೆ ಭೇಟಿಗೆ ಒಪ್ಪಿಕೊಳ್ಳಲಾಗಿದೆ. ಸಭೆಯು ಹೇಗೆ ಮತ್ತು ಯಾವಾಗ ನಡೆಯುತ್ತದೆ ಎಂಬುದನ್ನು ದೂತಾವಾಸಗಳು ನಿರ್ಧರಿಸುತ್ತವೆ. ಸಭೆಯ ಕಾರ್ಯಸೂಚಿ ಅಂತಿಮಗೊಂಡಿಲ್ಲ ಎಂದೂ ಕುಮಾರ್ ಹೇಳಿದ್ದರು.  ನೆರೆರಾಷ್ಟ್ರಗಳ ಮಧ್ಯೆ ಮಾತುಕತೆ ಪುನಾರಂಭ ಕೋರಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರವನ್ನು ಅನುಸರಿಸಿ ಬೆಳವಣಿಗೆಯಾಗಿತ್ತು. ಸೆಪ್ಟೆಂಬರ್ ೧೪ರ ದಿನಾಂಕದ ತಮ್ಮ ಪತ್ರದಲ್ಲಿ ರಾಜಕಾರಣಿಯಾಗಿ ಪರಿವರ್ತನೆಗೊಂಡ ಕ್ರಿಕೆಟಿಗ ಖಾನ್ ಖುರೇಶಿ ಮತ್ತು ಸ್ವರಾಜ್ ಸಭೆ ಪ್ರಸ್ತಾಪ ಮಾಡಿದ್ದರು. ಇಮ್ರಾನ್ ಖಾನ್ ಅವರು ಪಾಕ್ ಪ್ರಧಾನಿಯಾಗಿ ಅಧಿಕಾರ ವಹಿಸಿದ ಬಳಿಕ ಅವರನ್ನು ಅಭಿನಂದಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬರೆದ ಪತ್ರಕ್ಕೆ ಉತ್ತರವಾಗಿ ಪತ್ರ ಬರೆದಿದ್ದರು. ಸಾರ್ಕ್ ಶೃಂಗಸಭೆಗೆ ಮುಂಚಿತವಾಗಿ ನ್ಯೂಯಾರ್ಕ್ನಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಯಬೇಕು ಎಂದು ಅವರು ಹೇಳಿದ್ದರು. ೨೦೧೬ರ ಜನವರಿಯಲ್ಲಿ ಭಾರತದ ಪಠಾಣಕೋಟ್ ಸೇನಾ ನೆಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ ಉಭಯ ರಾಷ್ಟ್ರಗಳ ನಡುವಣ ಸಮಗ್ರ ದ್ವಿಪಕ್ಷೀಯ ಮಾತುಕತೆ ಸ್ಥಗಿತಗೊಂಡಿತ್ತು.
  

2017: ಚೆನ್ನೈ: ರಾಜಕೀಯ ಪ್ರವೇಶಿಸಲು ಸಿದ್ಧತೆ ನಡೆಸಿಕೊಂಡಿರುವ ಹಿರಿಯ ನಟ ಕಮಲಹಾಸನ್ಅವರನ್ನು ದೆಹಲಿ ಮುಖ್ಯಮಂತ್ರಿ, ಆಪ್ಮುಖ್ಯಸ್ಥ ಅರವಿಂದ್ಕೇಜ್ರಿವಾಲ್ಅವರು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿ ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದರು. ಈದಿನ ಚೆನ್ನೈಯ ಅಲ್ವಾರ್ಪೇಟ್ನಲ್ಲಿರುವ ಕಮಲ ಹಾಸನ್ನಿವಾಸದಲ್ಲಿ  ಇಬ್ಬರ ಭೇಟಿ ನಡೆದಿದ್ದು ಸಹಭೋಜನ ಸ್ವೀಕರಿಸಿ ಮಹತ್ವದ ಚರ್ಚೆ ನಡೆಸಿದರು. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್‌, 'ಕಮಲ್ ಹಾಸನ್ ಓರ್ವ ಸಮಗ್ರತೆ ಮತ್ತು ಧೈರ್ಯವಿರುವ  ವ್ಯಕ್ತಿ. ದೇಶ ಭ್ರಷ್ಟಾಚಾರ ಮತ್ತು ಕೋಮುವಾದವನ್ನು ಎದುರಿಸುತ್ತಿದ್ದು, ಎಲ್ಲಾ ರೀತಿಯ ಮನಸ್ಸಿನ ಜನರು ಒಂದಾಗಿ ಮಾತನಾಡಬೇಕಾಗಿದೆ. ಇಬ್ಬರು ಲಪ್ರದ ಮಾತುಕತೆ ನಡೆಸಿದ್ದೇವೆ' ಎಂದರುಕಮಲಹಾಸನ್ಮಾತನಾಡಿ 'ಕೇಜ್ರಿವಾಲ್ಅವರು ನನ್ನನ್ನು ಭೇಟಿಯಾಗಲು ಬಯಸಿದ್ದರು . ಉದ್ದೇಶ ಒಂದೇ ,  ಭ್ರಷ್ಟಾಚಾರ ವಿರೋಧಿಸಿ. ರಾಜಕೀಯಸ್ಥಿತಿಗತಿಯನ್ನು ಅರಿಯಲು ನಾವು ಮಾತುಕತೆ ನಡೆಸಿದ್ದೇವೆ. ಇದು ನನಗೆ ರಾಜಕೀಯ ಕಲಿಕೆಯ ತಿರುವು' ಎಂದು ನುಡಿದರು. ಕಮಲಹಾಸನ್ಅವರು ಆಪ್ಸೇರ್ಪಡೆಯಾಗುತ್ತಾರೋ, ಇಲ್ಲ ಹೊಸ ಪಕ್ಷ ಹುಟ್ಟು ಹಾಕಿ ಆಪ್ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೋ ಎನ್ನುವ ಕೂತುಹಲ ಮೂಡಿದೆ.

2017: ಮುಂಬಯಿ : ''1993 ಮುಂಬಯಿ ಸರಣಿ ಬಾಂಬ್ಸ್ಫೋಟದ ಪ್ರಮುಖ ಸೂತ್ರಧಾರನಾಗಿರುವ ಭಾರತದ ಮೋಸ್ಟ್ವಾಂಟೆಡ್ಭೂಗತ ಜಗತ್ತಿನ ಪಾತಕಿ ದಾವೂದ್ಇಬ್ರಾಹಿಂ ಪಾಕಿಸ್ಥಾನದಲ್ಲೇ ಇದ್ದಾನೆ; ನರೇಂದ್ರ ಮೋದಿ ಅವರ ಅಧಿಕಾರಕ್ಕೆ ಬಂದ ಬಳಿಕ ಆತ ವರೆಗೆ ಒಟ್ಟು ನಾಲ್ಕು ಬಾರಿ ಪಾಕಿಸ್ಥಾನದಲ್ಲಿ ತನ್ನ ವಾಸ್ತವ್ಯವನ್ನು ಬದಲಾಯಿಸಿದ್ದಾನೆ ಮತ್ತು ಅವನ ಭದ್ರತೆಯನ್ನು ಪಾಕ್ಸರಕಾರ ಶೇ.50ರಷ್ಟು ಹೆಚ್ಚಿಸಿದೆ'' ಎಂಬ ಮಹತ್ವದ ಸಂಗತಿಗಳನ್ನು ಈಚೆಗೆ ಸೆರೆಯಾಗಿರುವ ದಾವೂದ್ಸಹೋದರ ಇಕ್ಬಾಲ್ಕಸ್ಕರ್ತನಿಖಾಧಿಕಾರಿಗಳಲ್ಲಿ ಹೇಳಿರುವುದಾಗಿ ವರದಿಗಳು ತಿಳಿಸಿವೆ. ಸುಲಿಗೆ ಕೇಸುಗಳಿಗೆ ಸಂಬಂಧಿಸಿ ಸೆರೆಯಾದ ಬಳಿಕ ಎಂಟು ದಿನಗಳ ಪೊಲೀಸ್ಕಸ್ಟಡಿಯಲ್ಲಿದ್ದ ಕಸ್ಕರ್‌, ತನ್ನ ಸಹೋದರ ದಾವೂದ್ಪಶ್ಚಿಮ ಮತ್ತು ಉತ್ತರ ಆಫ್ರಿಕ ದೇಶಗಳಲ್ಲಿ  ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಮಾಡಿದ್ದಾನೆ ಎಂದು ಬಾಯಿ ಬಿಟ್ಟಿದ್ದಾನೆ. ಭಾರತೀಯ ಭದ್ರತಾ ಸಂಸ್ಥೆಗಳು ತನ್ನ ಧ್ವನಿ ಮುದ್ರಣ ಮಾಡುವುದನ್ನು ತಪ್ಪಿಸಲು ದಾವೂದ್ಕಳೆದ ಕೆಲ ಸಮಯದಿಂದ ತನ್ನ ಯಾವುದೇ ಸಂಬಂಧಿಕರೊಂದಿಗೆ ಫೋನಿನಲ್ಲಿ ಮಾತನಾಡುತ್ತಿಲ್ಲ ಎಂದು ಕಸ್ಕರ್ಪೊಲೀಸ್ಅಧಿಕಾರಿಗಳಿಗೆ ಹೇಳಿದ್ದಾನೆಮುಂಬಯಿಯಲ್ಲಿ ಸುಲಿಗೆ ನಡೆಸಲು ಕಸ್ಕರ್‌, ದಾವೂದ್ ಸಹೋದರ ಅನೀಸ್ಇಬ್ರಾಹಿಂ ಜತೆಗೂಡಿ ಕೆಲಸ ಮಾಡುತ್ತಿದ್ದ. ಅಮೆರಿಕದಿಂದ ಜಾಗತಿಕ ಉಗ್ರನೆಂದು ಘೋಷಿಸಲ್ಪಟ್ಟಿರುವ ದಾವೂದ್ಇಬ್ರಾಹಿಂ, ದಕ್ಷಿಣ ಅಮೆರಿಕದ ಮಾದಕ ದ್ರವ್ಯ ದೊರೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಕಸ್ಕರ್ಹೇಳಿರುವುದಾಗಿಯೂ ವರದಿಗಳು ಹೇಳಿದವು.

2017: ಬೆಂಗಳೂರು: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ‘ಪೋಸ್ಟ್ಕಾರ್ಡ್ಕನ್ನಡ ಡಾಟ್ ಕಾಂವೆಬ್ಸೈಟ್ಮಾಲೀಕರ ವಿರುದ್ಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿತು. ಈ ಕುರಿತು ಕೆ.ಪಿ.ಸಿ.ಸಿ. ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗವು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತ ಅವರಿಗೆ ಪತ್ರ ಬರೆದು ವೆಬ್ಸೈಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತು. ದೂರಿನಲ್ಲೇನಿದೆ?: ಇಂದಿರಾ ಗಾಂಧಿ ಅವರ ವಿರುದ್ಧ ಅಪಪ್ರಚಾರ ಮಾಡಲುಪೋಸ್ಟ್ಕಾರ್ಡ್ಕನ್ನಡ ಡಾಟ್ ಕಾಂವೆಬ್ಸೈಟ್ಸೃಷ್ಟಿಸಲಾಗಿದೆ. ಅವರ ಚಾರಿತ್ರ್ಯಕ್ಕೆ ಧಕ್ಕೆ ತರುವಂತಹ ಮತ್ತು ಅವರ ಬಗ್ಗೆ ಕೀಳು ಮಟ್ಟದ ಸುದ್ದಿಗಳನ್ನು ಪ್ರಕಟ ಮಾಡಲಾಗುತ್ತಿದೆ. ಅಲ್ಲದೆ, ದೇಶದ ಎಲ್ಲ ಮಹಿಳೆಯರನ್ನು ಅವಮಾನಿಸುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟ ಮಾಡಲಾಗುತ್ತಿದೆ. ಇಂದಿರಾ ಗಾಂಧಿ ಅವರ ಬಗ್ಗೆ ಅಪಪ್ರಚಾರ ಮಾಡುವವರ ಮತ್ತು ವೆಬ್ಸೈಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇವೆಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ದೂರು ನೀಡಿದ್ದ ಬಿಜೆಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆಮೈಬೆಂಗಳೂರು ಡಾಟ್ಕಾಂಎಂಬ ವೆಬ್ಸೈಟ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು. ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಧ್ವಜದ ಬದಲು ಬಿಜೆಪಿ ಧ್ವಜ ಹಾರಿಸುವಂತೆ ಅಮಿತ್ಷಾ ಕರೆ ನೀಡಿದ್ದಾರೆ ಎಂದುಮೈಬೆಂಗಳೂರು ಡಾಟ್ಕಾಂವೆಬ್ಸೈಟ್ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ ಎಂದು ಬಿಜೆಪಿ ದೂರಿತ್ತು.

2017: ಮುಂಬಯಿ : "ದಾವೂದ್ಇಬ್ರಾಹಿಂ ಭಾರತಕ್ಕೆ ಮರಳಲು ಬಯಸಿದ್ದಾನೆ ಮತ್ತು ನಿಟ್ಟಿನಲ್ಲಿ ಆತ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾನೆ; ದಾವೂದ್ಭಾರತಕ್ಕೆ ಮರಳುವ ರಾಜಕೀಯ ಲಾಭವನ್ನು ಕೇಂದ್ರ ಸರಕಾರ ಬಾಚಿಕೊಳ್ಳಲಿದೆ' ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್‌) ಮುಖ್ಯಸ್ಥ ರಾಜ ಠಾಕ್ರೇ ಹೇಳಿದರು. ತಮ್ಮ ಅಧಿಕೃತ ಫೇಸ್ಬುಕ್ಪೇಜ್ಬಿಡುಗಡೆ ಸಂದರ್ಭದಲ್ಲಿ ಮಾತನಾಡುತ್ತಿದ್ದ ರಾಜ್ಠಾಕ್ರೆ "ದಾವೂದ್ಈಗ ದೈಹಿಕವಾಗಿ ವಿಕಲಾಂಗನಾಗಿದ್ದಾನೆ. ಆದ ಕಾರಣ ಆತ ಭಾರತಕ್ಕೆ ಮರಳಲು ಉತ್ಸುಕನಾಗಿದ್ದಾನೆ ಮತ್ತು ಬಗ್ಗೆ ಕೇಂದ್ರ ಸರಕಾರದೊಂದಿಗೆ ಚೌಕಾಶಿ ನಡೆಸುತ್ತಿದ್ದಾನೆ. ಮುಂದಿನ ಮಹಾಚುನಾವಣೆಗೆ ಕೊಂಚ ಮುನ್ನ ಸರಕಾರ ದಾವೂದ್ನನ್ನು ಭಾರತಕ್ಕೆ ತರಲಿದೆ ಮತು ಅದರ ಪೂರ್ತಿ ರಾಜಕೀಯ ಲಾಭವನ್ನು ಪಡೆಯುವ ಹುನ್ನಾರ ಹೊಂದಿದೆ. ನಾನೇನೂ ಜೋಕ್ಮಾಡುತ್ತಿಲ್ಲ; ಆದರೆ ಇದು ನಿಜ ಮತ್ತು ಸದ್ಯದಲ್ಲೇ ಅದು ನಿಜವೆಂದು ನಿಮಗೂ ಗೊತ್ತಾಗಲಿದೆ' ಎಂದು ನುಡಿದರು. "ದಾವೂದ್ದೇಶಕ್ಕೆ ಮರಳಲು ಸಿದ್ಧನಾದಾಗ ನರೇಂದ್ರ ಮೋದಿ ಸರಕಾರ ಬಗ್ಗೆ ತಮಟೆ ಬಾರಿಸಲಿದೆ; ಬಿಜೆಪಿಯ ಪಾಲಿಗೆ ಅದೊಂದು ಭಾರೀ ಲಾಭದಾಯಕ ರಾಜಕೀಯ ನಡೆ ಆಗಲಿದೆ' ಎಂದು ಠಾಕ್ರೆ ಹೇಳಿದರು

2014: ಮುಂಬೈ: ಚಿತ್ರ ನಟಿ ಪ್ರಿಯಾಂಕಾ ಛೋಪ್ರಾ ಅವರ ಅಭಿಮಾನಿಗಳ ಸಂಖ್ಯೆ ಮೈಕ್ರೋ ಬ್ಲಾಗಿಂಗ್ 'ಟ್ವಿಟ್ಟರ್'ನಲ್ಲಿ 70 ಲಕ್ಷದ ಗಡಿ ದಾಟಿತು. 2009ರಲ್ಲಿ ಟ್ವಿಟ್ಟರ್ ಬಳಗ ಸೇರಿದ್ದ 32ರ ಹರೆಯದ 'ಮೇರಿ ಕೊಮ್ ನಟಿ ಸಾಮಾಜಿಕ ಮಾಧ್ಯಮದಲ್ಲಿ ತಮಗೆ ಅಪೂರ್ವ ಬೆಂಬಲ ನೀಡಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. '70 ಲಕ್ಷ ಸಂಖ್ಯೆಯಲ್ಲಿ ಅಭಿಮಾನಿಗಳಾಗಿರುವ ನಿಮಗೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಕುಟುಂಬ ದೊಡ್ಡದಾಗುತ್ತಿದೆ. ನಿಮ್ಮ ಪ್ರೀತಿ ನನ್ನನ್ನು ಸದಾ ಹುರಿದುಂಬಿಸುತ್ತದೆ.' ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು. ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವ ಪ್ರಿಯಾಂಕಾ ಟ್ವಿಟ್ಟರ್​ನಲ್ಲಿ ಅತ್ಯಂತ ಜನಪ್ರಿಯರಾಗಿರುವ ಭಾರತದ ನಾಲ್ಕನೇ ಪ್ರಖ್ಯಾತ ವ್ಯಕ್ತಿ.

2014:  ಮುಂಬೈ: ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಶಿವಸೇನೆ ನಡುವನ ಬಿಕ್ಕಟ್ಟು ಇನ್ನೂ ಮುಂದುವರಿಯಿತು. ಈ ಮಧ್ಯೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮೈತ್ರಿಕೂಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೊನೆಗಳಿಗೆಯ ಯತ್ನವಾಗಿ 'ಅಂತಿಮ ಸೂತ್ರ'ವೊಂದನ್ನು ಮುಂದಿಟ್ಟರು. ಮುಂಬೈಯಲ್ಲಿ ಶಿವಸೇನೆಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ 'ನಾವು ಸೇನಾ ಸ್ಥಾನಗಳನ್ನು ಬಲಿಗೊಡುವ ಮೂಲಕ ಮೈತ್ರಿಕೂಟ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಶಿವಸೇನೆಗೆ 151 ಸ್ಥಾನ ಮತ್ತು ಬಿಜೆಪಿಗೆ 119 ಸ್ಥಾನಗಳ ಹೊಸ ಸೂತ್ರವನ್ನು ನಾವು ಮುಂದಿಡುತ್ತಿದ್ದೇವೆ' ಎಂದು ಹೇಳಿದರು. ಶಿವಸೇನೆಯು 18 ಸ್ಥಾನಗಳನ್ನು ತನ್ನ ಕೋಟಾದಿಂದಲೇ ಮೈತ್ರಿಕೂಟದ ನಾಲ್ಕು ಅಂಗಪಕ್ಷಗಳಾದ ಆರ್​ಪಿಐ, ಸ್ವಾಭಿಮಾನಿ ಶೇತ್ಕರಿ ಸಂಘಟನೆ, ರಾಷ್ಟ್ರೀಯ ಸಮಾಜ ಪಾರ್ಟಿ ಮತ್ತಿ ಶಿವ ಸಂಗ್ರಾಮ ಸಂಘಟನೆಗಳಿಗೆ ಹಂಚುವುದು ಮತ್ತು ಬಿಜೆಪಿಯ ಕೋಟಾ ಅಲುಗಾಡದಂತೆ ನೋಡಿಕೊಳ್ಳುವುದು ಎಂದು ಠಾಕ್ರೆ ಹೇಳಿದರು. 'ಸ್ಥಾನ ಹೊಂದಾಣಿಕೆ ಅತ್ಯಂತ ಕ್ಲಿಷ್ಟ ವ್ಯವಹಾರ. ಮಹಾರಾಷ್ಟ್ರದ ಸಲುವಾಗಿ ನಾನು 2-3 ಸ್ಥಾನ ತ್ಯಾಗಕ್ಕೆ ಸಿದ್ಧನಾಗಿದ್ದೇನೆ. ನಾವು ಕೆಲವು ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ ಒಬ್ಬ ವ್ಯಕ್ತಿಗೆ ಮಾತ್ರ ನ್ಯಾಯ ಲಭಿಸುತ್ತದೆ. ಆದರೆ ನಾವು ಅಧಿಕಾರಕ್ಕೆ ಬಂದರೆ ಬಂದರೆ ಪ್ರತಿಯೊಬ್ಬರಿಗೂ ನ್ಯಾಯ ಲಭಿಸುತ್ತದೆ' ಎಂದು ಠಾಕ್ರೆ ನುಡಿದರು. 'ಪಕ್ಷದ ಕಾರ್ಯಕರ್ತರು ನನಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ವಹಿಸಿದ್ದಾರೆ. ನಾನು ಅದನ್ನು ಜವಾಬ್ದಾರಿಯಿಂದ ನಿರ್ವಹಿಸುವೆ. ಏನಾದರೂ ಲಾಭಗಳಿಕೆಗಾಗಿ ನಾನು ಅಧಿಕಾರ ಬಯಸುವುದಿಲ್ಲ, ಆದರೆ ಮಹಾರಾಷ್ಟ್ರದ ಜನತೆಗೆ ಸ್ವಲ್ಪವಾದರೂ ಹಿಂದಿರುಗಿಸಬಯಸುತ್ತೇನೆ. ಅವರು ಏನು ಬಯಸುತ್ತಿದ್ದಾರೆ ಎಂಬುದನ್ನು ನಾನು ತಿಳಿದುಕೊಳ್ಳ ಬಯಸುತ್ತೇನೆ' ಎಂದು ಅವರು ಹೇಳಿದರು. ಬಿಜೆಪಿಯನ್ನು ಟೀಕೆ ಮಾಡಬೇಡಿ ಎಂದು ಸೇನಾ ನಾಯಕರಿಗೆ ಸಲಹೆ ಮಾಡಿದ ಉದ್ಧವ್, 'ಅದು ನಮ್ಮ ಸಂಸ್ಕೃತಿ ಅಲ್ಲ. ಪ್ರಮೋದ್ ಮಹಾಜನ್ ಮತ್ತು ಗೋಪಿನಾಥ ಮುಂಡೆ ಅವರ ಮಧ್ಯೆಯೂ ಭಿನ್ನಾಭಿಪ್ರಾಯಗಳಿದ್ದವು. ಆದರೆ ಆ ಸಮಯದಲ್ಲಿ ಯಾರೂ ವಿಷಯದ ಮೇಲೆ ಜಗ್ಗಾಡಲಿಲ್ಲ. ಮೈತ್ರಿಕೂಟ ಮುಂದುವರಿಯುತ್ತದೆಯೋ ಇಲ್ಲವೋ ನಾನಂತೂ ಸಮರಕ್ಕೆ ಸಿದ್ಧನಾಗಿದ್ದೇನೆ' ಎಂದು ಠಾಕ್ರೆ ನುಡಿದರು. ಈ ಮಧ್ಯೆ ಬಿಜೆಪಿ ತಾನು ಮೈತ್ರಿ ಮುಂದುವರಿಸಬಯಸುವುದಾಗಿ ಹೇಳಿದೆ. 'ನಾವು ಮೈತ್ರಿಕೂಟ ಉಳಿಸಿಕೊಳ್ಳಲು ಬಯಸುತ್ತೇವೆ. ಬಿಜೆಪಿ ತನ್ನ ಹಿತವನ್ನು ಬಲಿಗೊಟ್ಟಿದೆ. ಆದರೆ ಅವರು (ಶಿವಸೇನೆ) ತಮ್ಮದನ್ನು ಬಿಟ್ಟುಕೊಡಲು ಸಿದ್ಧರಾಗಿಲ್ಲ' ಎಂದು ಬಿಜೆಪಿ ಧುರೀಣ ಎಂದು ಏಕನಾಥ ಖಡ್ಸೆ ಹೇಳಿದರು. ಸ್ಥಾನ ಹೊಂದಾಣಿಕೆ ಕಾಂಗ್ರೆಸ್ಸನ್ನು ಸೋಲಿಸುವಂತಿರಬೇಕು ಎಂದು ಇನ್ನೊಬ್ಬ ಬಿಜೆಪಿ ಧುರೀಣ ತಾವಡೆ ಹೇಳಿದರು.

2014: ನವದೆಹಲಿ: ಮುಂಜಾಗರೂಕತಾ ಬಂಧನದಲ್ಲಿ ಇರುವ ವ್ಯಕ್ತಿಗಳಿಗೆ ಮತದಾನದ ಹಕ್ಕು ಇದೆ ಎಂದು ಸ್ಪಷ್ಟ ಪಡಿಸಿ ಚುನಾವಣಾ ಆಯೋಗ ನಿರ್ದೇಶನ ನೀಡಿತು. ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿಯೇ ಈ ನಿರ್ದೇಶನ ನೀಡಿದ ಆಯೋಗ ಈ ನಿರ್ದೇಶನದ ಉಲ್ಲಂಘನೆಗೆ ಯಾವುದೇ ಅವಕಾಶವೂ ಇರಕೂಡದು ಎಂದು ಎಚ್ಚರಿಕೆ ನೀಡಿತು. ಚುನಾವಣೆಗೆ ಮುಂಚಿತವಾಗಿ ಪೊಲೀಸರು ರಾಜಕೀಯ ಕಾರ್ಯಕರ್ತರು ಮತ್ತು ನಾಯಕರನ್ನು ಬಂಧಿಸುತ್ತಿದ್ದಾರೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮಹಾರಾಷ್ಟ್ರ ಮತ್ತು ಹರ್ಯಾಣ ಮುಖ್ಯಕಾರ್ಯದರ್ಶಿಗಳಿಗೆ ಈ ನಿಟ್ಟಿನಲ್ಲಿ ಪತ್ರ ಬರೆಯಿತು. ಜನತಾ ಪ್ರಾತಿನಿಧ್ಯ ಕಾಯ್ದೆಯ 62(5) ನೇ ವಿಧಿ ಮತ್ತು ಜೊತೆಗೆ ಚುನಾವಣೆ ನಿರ್ವಹಣಾ ನಿಯಮಗಳು ಮುಂಜಾಗರೂಕತಾ ಬಂಧನಕ್ಕೆ ಒಳಪಟ್ಟಿರುವವರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಿವೆ ಎಂದು ಅದು ಪತ್ರದಲ್ಲಿ ನೆನಪಿಸಿತು. ಪ್ರತಿಯೊಂದು ಕ್ಷೇತ್ರದ ಚುನಾವಣಾ ಅಧಿಕಾರಿಗೆ ಜಿಲ್ಲಾ ಆಡಳಿತವು ತಮ್ಮ ಕ್ಷೇತ್ರದಲ್ಲಿ ಮುಂಜಾಗರೂಕತಾ ಬಂಧನದಲ್ಲಿ ಇರುವ ವ್ಯಕ್ತಿಗಳ ಹೆಸರು, ವಿಳಾಸ ಮತ್ತು ಮತದಾರರ ಪಟ್ಟಿಯಲ್ಲಿನ ಅವರ ಕ್ರಮಸಂಖ್ಯೆ ವಿವರಗಳನ್ನು ಮುಂಚಿತವಾಗಿಯೇ ಲಿಖಿತವಾಗಿ ತಿಳಿಸಿ, ಅವರಿಗೆ ಅಂಚೆ ಮತಪತ್ರಗಳನ್ನು ಕಳುಹಿಸಲು ಅನುಕೂಲ ಮಾಡಿಕೊಡಬೇಕು ಎಂಬುದಾಗಿ ನಿರ್ದಿಷ್ಟ ಪಡಿಸಿದ ಚುನಾವಣೆ ನಿರ್ವಹಣಾ ನಿಯಮಗಳನ್ನು ಆಯೋಗವು ತನ್ನ ಪತ್ರದಲ್ಲಿ ಉಲ್ಲೇಖಿಸಿತು.. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸ್ಪಷ್ಟ ಸೂಚನೆಗಳನ್ನು ನೀಡಬೇಕು ಎಂದೂ ಆಯೋಗ ಸೂಚಿಸಿತು.

2014: ಇಂಚೋನ್ (ದಕ್ಷಿಣ ಕೊರಿಯಾ): 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ 10 ಮೀಟರ್ ಏರ್ ಪಿಸ್ತೂಲ್ ತಂಡವನ್ನು ಜಿತು ರೈ ಕಂಚಿನ ಪದಕ ಗೆಲ್ಲುವತ್ತ ಮುನ್ನಡೆಸಿದರು. ಆದರೆ ಒಂಗ್ನಿಯೋನ್ ಅಂತಾರಾಷ್ಟ್ರೀಯ ಶೂಟಿಂಗ್ ವಲಯದಲ್ಲಿ ಸ್ವಲ್ಪದರಲ್ಲೇ ಅವರು ಕಂಚಿನ ಪದಕ ತಪ್ಪಿಸಿಕೊಂಡರು. ಈ ಸ್ಪರ್ಧೆಯಲ್ಲಿ ಅವರು ಐದನೇ ಸ್ಥಾನ ಗಳಿಸಿದರು. 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡ ಭಾರತದ ಸೇನಾ ಶೂಟರ್ ಜಿತು, ಪುರುಷರ ತಂಡವನ್ನು ಅತ್ಯುತ್ಸಾಹದೊಂದಿಗೆ ಮುನ್ನಡೆಸುವ ಮೂಲಕ ಭಾರತಕ್ಕೆ ಎರಡನೇ ಕಂಚಿನ ಪದಕ ತಂದುಕೊಡುವಲ್ಲಿ ಸಫಲರಾದರು. ತಂಡದಲ್ಲಿ ಜಿತು ಜೊತೆ ಸಮರೇಶ್ ಜಂಗ್ ಮತ್ತು ಪ್ರಕಾಶ ನಂಜಪ್ಪ ಇದ್ದರು. ಭಾರತ ಮತ್ತು ಚೀನಾ 1743 ಪಾಯಿಂಟ್​ಗಳಲ್ಲಿ ಹಣಾಹಣಿ ನಡೆಸಿದವು. ಕೊನೆಗೆ ಚೀನಾ ಹೆಚ್ಚುವರಿ ಒಂದು ಪಾಯಿಂಟ್ ಮೂಲಕ ಬೆಳ್ಳಿ ಪದಕವನ್ನು ತನ್ನ ಬಗಲಿಗೆ ಹಾಕಿಕೊಂಡಿತು.

2014: ನವದೆಹಲಿ: ಪ್ರಾದೇಶಿಕ ಮತ್ತು ದೂರದ ಪ್ರದೇಶಗಳಿಗೆ ವೈಮಾನಿಕ ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಕರಡು ನೀತಿಯನ್ನು ವಿಮಾನಯಾನ ಸಂಸ್ಥೆಗಳು ಮತ್ತು ಖಾಸಗಿ ವಿಮಾನ ಆಪರೇಟರ್​ಗಳು ವಿರೋಧಿಸಿದರು.. 'ಸರ್ಕಾರದ ಈ ನೀತಿಯಿಂದ ತಮ್ಮ ಹಣಕಾಸು ಸಾಮರ್ಥ್ಯ ಮೇಲೆ ತೀವ್ರ ದುಷ್ಪರಿಣಾಮವಾಗುವುದು ಎಂದು ಏರ್ ಲೈನ್ಸ್ ಮತ್ತು ಖಾಸಗಿ ವಿಮಾನ ಆಪರೇಟರ್​ಗಳು ಪ್ರತಿಪಾದಿಸಿದರು. ಪ್ರಸ್ತಾವಿತ ಟಾಟಾ-ಸಿಯಾ ವಾಹಕ ವಿಸ್ತಾರ ಸೇರಿದಂತೆ ಬಹುತೇಕ ಎಲ್ಲಾ ವಿಮಾನಯಾನ ಸಂಸ್ಥೆಗಳು, ವ್ಯಾಪಾರೀ ಜೆಟ್ ಆಪರೇಟರ್​ಗಳು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕರಡು ಮಸೂದೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಕರಡು ನೀತಿಯ ವಿವಿಧ ವಿಧಿಗಳನ್ನು ಅವರು ವಿರೋಧಿಸಿದರು ಮತ್ತು ಈ ಬಗ್ಗೆ ಇನ್ನಷ್ಟು ರ್ಚಚಿಸುವ ಅಗತ್ಯವಿದೆ ಎಂದು ಹೇಳಿದರು..

2014: ಇಂಚೋನ್: ಭಾರತ ಪುರುಷರ ಹಾಕಿ ತಂಡ ಏಷ್ಯಾಡ್​ನಲ್ಲಿ ಭಾನುವಾರ ಭರ್ಜರಿ ಶುಭಾರಂಭ ಮಾಡಿತು. ಇಲ್ಲಿ ನಡೆದ ಕೂಟದ 'ಬಿ' ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ರೂಪಿಂದರ್ ಸಿಂಗ್ (12, 45, 46ನೇ ನಿಮಿಷ) ಸಿಡಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ತಂಡ ದುರ್ಬಲ ಶ್ರೀಲಂಕಾ ವಿರುದ್ಧ 8-0 ಗೋಲುಗಳಿಂದ ಜಯ ಸಾಧಿಸಿತು. ರಮಣದೀಪ್ ಸಿಂಗ್ (28, 59ನೇ ನಿಮಿಷ), ಕನ್ನಡಿಗ ವಿಆರ್ ರಘುನಾಥ್, ಡ್ಯಾನೀಶ್ ಮುಜ್​ತುಬಾ, ಕಂಗುಜಾಮ್​ಚಿನ್​ಗ್ಲೇನ್​ಸನಾ ತಲಾ ಒಂದು ಗೋಲು ಗಳಿಸಿದರು. ಪಂದ್ಯದ 6ನೇ ನಿಮಿಷದಲ್ಲೇ ಮುಜ್​ತುಬಾ ಗೋಲು ಗಳಿಸುವ ಮೂಲಕ ಭಾರತ ತಂಡಕ್ಕೆ ಮೊದಲ ಗೋಲು ತಂದರು.

2014: ನವದೆಹಲಿ: 2010ರ ಧೌಲಾ ಕುವಾನ್ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಅಡಿಷನಲ್ ಸೆಷನ್ಸ್ ನ್ಯಾಯಾಲಯವು ಸೆಪ್ಟೆಂಬರ್ 22 ರಂದು ತನ್ನ ತೀರ್ಪ ಪ್ರಕಟಿಸಲಿದೆ. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ವೀರೇಂದರ್ ಭಟ್ ಅವರು ಸೆಪ್ಟೆಂಬರ್ 8ರಂದು ಪ್ರಕರಣದ ಅಂತಿಮ ವಾದ ಮಂಡನೆ ಬಳಿಕ ಸೆಪ್ಟೆಂಬರ್ 22ಕ್ಕೆ ತೀರ್ಪ ಕಾಯ್ದಿರಿಸಿದ್ದರು. ಆರೋಪಿಗಳಾದ ಶಂಶದ್ ಯಾನೆ ಖುಟ್ಕನ್, ಉಸ್ಮಾನ್ ಯಾನೆ ಕಾಲೆ, ಶಹೀದ್ ಯಾನೆ ಛೋಟಾ ಬಿಲ್ಲಿ, ಇಕ್ಬಾಲ್ ಯಾನೆ ಬಡಾ ಬಿಲ್ಲಿ ಮತ್ತು ಕಮರುದ್ದೀನ್ ಅವರನ್ನು ದಕ್ಷಿಣ ದೆಹಲಿಯ ಧೌಲಾ ಕುವಾನ್ ಪ್ರದೇಶದ ಕಾಲ್ ಸೆಂಟರ್ ಒಂದರ ಎಕ್ಸಿಕ್ಯೂಟಿವ್ 30ರ ಹರೆಯದ ಮಹಿಳೆಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ವಿಚಾರಣೆಗೆ ಗುರಿ ಪಡಿಸಲಾಗಿತ್ತು. ಪೊಲೀಸರ ಪ್ರಕಾರ ಐವರು ಪುರುಷರು ಈಶಾನ್ಯ ಪ್ರದೇಶದಿಂದ ಬಂದಿದ್ದ ಮಹಿಳೆಯನ್ನು 2010ರ ನವೆಂಬರ್ 24ರಂದು ಪಾಳಿ ಕೆಲಸ ಮುಗಿಸಿ ಗೆಳತಿ ಜೊತೆಗೆ ಮನೆಗೆ ನಡೆಯುತ್ತಾ ಹೊರಟಿದ್ದಾಗ ಅಪಹರಿಸಿ, ಮಂಗಲಪುರಿಗೆ ಒಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ನಿರ್ಜನ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಐದೂ ಮಂದಿ ಆರೋಪಿಗಳನ್ನು ಬಳಿಕ ಹರ್ಯಾಣದ ಮೇವತ್​ನಲ್ಲಿ ಬಂಧಿಸಲಾಗಿತ್ತು. ವಿಚಾರಣೆ ಕಾಲದಲ್ಲಿ ಅವರು ತಾವು ನಿರಪರಾಧಿಗಳೆಂದೂ, ತಮ್ಮನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದೂ ವಾದಿಸಿದ್ದರು. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಹಾಗೂ ಅಪಹರಣ ಆರೋಪಗಳಿಗಾಗಿ ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. ಈ ಘಟನೆಯ ಬಳಿಕ ಪೊಲೀಸರು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ಒದಗಿಸಿ ಸುರಕ್ಷಿತವಾಗಿ ಮನೆಗಳಿಗೆ ತಲುಪಿಸಬೇಕು ಎಂದು ದೆಹಲಿಯ ಎಲ್ಲ ಬಿಪಿಒಗಳಿಗೂ ಆದೇಶ ನೀಡಿದ್ದರು.

2008: ಭ್ರಷ್ಟಾಚಾರದ ಕಳಂಕ ಹೊತ್ತ ಇಸ್ರೇಲಿನ ಪ್ರಧಾನಿ ಯೆಹುದ್ ಓಲ್ಮರ್ಟ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೆರುಸಲೇಮಿನಲ್ಲಿ ಪ್ರಕಟಿಸಿದರು. ಆಡಳಿತಾರೂಢ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾದ ತಮ್ಮ ಉತ್ತರಾಧಿಕಾರಿ ಟ್ಜಿಪಿ ಲಿವ್ನಿ ಅವರಿಗೆ ಸಮ್ಮಿಶ್ರ ಸರ್ಕಾರ ರಚನೆಗೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಓಲ್ಮರ್ಟ್ (63) ಅವರ 33 ತಿಂಗಳ ಪ್ರಧಾನಿ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ಅವರ ವರ್ಚಸ್ಸನ್ನು ಸಂಪೂರ್ಣವಾಗಿ ನುಂಗಿ ಹಾಕಿದ್ದು, ಸಮ್ಮಿಶ್ರ ಸರ್ಕಾರದ ಇತರ ಪಕ್ಷಗಳು ಬೆಂಬಲ ವಾಪಸ್ ಪಡೆಯುವ ಬೆದರಿಕೆ ಒಡ್ಡಿದ್ದವು.

2008: ರಾಷ್ಟ್ರದ ಮೊತ್ತ ಮೊದಲ ಇ- ಗ್ರಂಥಾಲಯವನ್ನು ಪಣಜಿಯ ಹೈಕೋರ್ಟ್ ಆವರಣದಲ್ಲಿ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಉದ್ಘಾಟಿಸಿದರು. ನ್ಯಾಯ ಸುಲಭವಾಗಿ ಜನಸಾಮಾನ್ಯನಿಗೆ ಸಿಗುವಂತಾಗಲಿ ಎಂಬ ಕಾರಣದಿಂದ ಮೊದಲ `ಇ-ಗ್ರಂಥಾಲಯ'ವನ್ನು ವಕೀಲರ ಅನುಕೂಲಕ್ಕಾಗಿ ರೂಪಿಸಲಾಗಿದೆ ಎಂದು ಕಾಮತ್ ಹೇಳಿದರು. ಮಹಾರಾಷ್ಟ್ರ ಹಾಗೂ ಗೋವಾ ವಕೀಲರ ಸಂಘಗಳು ಭಾರತದ ವಕೀಲರ ಸಂಘಗಳಲ್ಲಿ ಬಹುದೊಡ್ಡವು. ಕಾನೂನು ವಿಷಯಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಲು ಈ ಅಂತರ್ಜಾಲ (ಆನ್ ಲೈನ್) ವ್ಯವಸ್ಥೆಯಿಂದ  ಅನುಕೂಲವಾಗುವುದು. ಇದರಲ್ಲಿ ಕೋರ್ಟ್ ತೀರ್ಪುಗಳೂ ದೊರೆಯುವುವು.

2007: ನ್ಯಾಯಾಂಗ ನಿಂದನೆ ಆರೋಪದ ಮೇಲೆ `ಮಿಡ್ ಡೇ' ಪತ್ರಿಕೆಯ ನಾಲ್ವರು ಪತ್ರಕರ್ತರಿಗೆ ನಾಲ್ಕು ತಿಂಗಳ ಶಿಕ್ಷೆ ವಿಧಿಸಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಆರ್.ಎಸ್.ಸೋಧಿ ಮತ್ತು  ಬಿ.ಎನ್.ಚತುರ್ವೇದಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿ, `ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ವರದಿ  ಪ್ರಕಟಿಸುವ ಮೂಲಕ ಆರೋಪಿಗಳು, ಉನ್ನತ ನ್ಯಾಯಾಲಯದ ಘನತೆಗೆ ಕುಂದು ತಂದಿದ್ದಾರೆ' ಎಂದು ತಿಳಿಸಿತು. 2007ರ ಮೇ 19 ರಂದು `ಮಿಡ್ ಡೇ' ಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿತ್ತು. ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ಕೆ.ಸಬರ್ ವಾಲ್ ಅವರ ನೇತೃತ್ವದ ಪೀಠವು ದೆಹಲಿಯಲ್ಲಿ ವಸತಿ ಪ್ರದೇಶಗಳಲ್ಲಿನ ಅನಧಿಕೃತ ಅಂಗಡಿಗಳಿಗೆ `ಬೀಗಮುದ್ರೆ' ಹಾಕುವ ಪ್ರಕರಣ ಕುರಿತು ನೀಡಿದ ತೀರ್ಪು ತಮ್ಮ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿತ್ತು. ಸಬರ್ವಾಲ್  ಅವರ ಮಕ್ಕಳು ದೆಹಲಿಯ ಕೆಲ ಮಾಲ್ ಗಳ ಡೆವಲಪರ್ಸ್ ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದು ಲೇಖನದ ಸಾರವಾಗಿತ್ತು. ಈ ಬಗ್ಗೆ  ವಿಚಾರಣೆ  ನಡೆದು ನಂತರ ಸೆಪ್ಟೆಂಬರ್ 11ರ ತೀರ್ಪಿನಲ್ಲಿ ಪತ್ರಿಕೆಯ ಸ್ಥಾನಿಕ ಸಂಪಾದಕಿ ವಿತುಷಾ ಒಬೇರಾಯ್, ನಗರ ಸಂಪಾದಕ ಎಂ.ಕೆ.ತಯಾಲ್, ವ್ಯಂಗ್ಯಚಿತ್ರಕಾರ ಇರ್ಫಾನ್ ಖಾನ್ ಮತ್ತು ಎಸ್.ಕೆ.ಅಖ್ತರ್ ಅವರನ್ನು ದೋಷಿಗಳೆಂದು ಹೇಳಲಾಗಿತ್ತು. ಈದಿನ ಇವರಿಗೆ ಶಿಕ್ಷೆಯನ್ನು ಪ್ರಕಟಿಸಲಾಯಿತು.

2007: ಭಾರತ -ಅಮೆರಿಕ ನಾಗರಿಕ ಪರಮಾಣು ಒಪ್ಪಂದವು ಪರಮಾಣು ಇಂಧನದ ಕೊರತೆ ನೀಗಿಸಬಲ್ಲುದು ಎಂದು ಹೇಳುವ ಮೂಲಕ ಸಿಪಿಎಂ ಹಿರಿಯ ಧುರೀಣ ಜ್ಯೋತಿ ಬಸು ಅವರೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಬುದ್ಧದೇವ್ ಭಟ್ಟಾಚಾರ್ಯ ಅವರ ಹಾದಿ  ತುಳಿದರು. ಪರಮಾಣು ಒಪ್ಪಂದ ಕುರಿತು ಯುಪಿಎ ಮತ್ತು  ಎಡಪಕ್ಷಗಳ ನಡುವೆ ಭಾರೀ ಭಿನ್ನಾಭಿಪ್ರಾಯ ತಲೆದೋರಿದ್ದಾಗಲೇ ಕೆಲ ದಿನಗಳ ಹಿಂದೆ ಬುದ್ಧದೇವ್ ಭಟ್ಟಾಚಾರ್ಯ ಅವರು, ಪರಮಾಣು ಶಕ್ತಿಯ ಅಗತ್ಯತೆಯನ್ನು ಪ್ರತಿಪಾದಿಸಿ ಎಲ್ಲರ ಹುಬ್ಬೇರಿಸಿದ್ದರು. ಜ್ಯೋತಿ  ಬಸು ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

2007: ರಾಮ ಸೇತು ವಿವಾದದಲ್ಲಿ ತನ್ನ ದನಿಯನ್ನು ಮತ್ತಷ್ಟು ಎತ್ತರಿಸಿದ ಬಿಜೆಪಿ, ಶ್ರೀರಾಮನ ಕುರಿತು ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ವಾಪಸು ಪಡೆಯುವಂತೆ ಕರುಣಾನಿಧಿ ಅವರ ಮನವೊಲಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾದಲ್ಲಿ ಡಿಎಂಕೆಯ ಎಲ್ಲ ಸಚಿವರನ್ನೂ ವಜಾ ಮಾಡಬೇಕು ಎಂದು ಆಗ್ರಹಿಸಿತು. ಇಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಈ ಆಗ್ರಹ ಮಾಡಿದರು.

2007: ನಕಲಿ ಛಾಪಾ ಕಾಗದ ಪ್ರಕರಣದ ಆರೋಪಿ ಬೆಂಗಳೂರು ಕೇಂದ್ರ ಕಾರಾಗೃಹದ ಮಾಜಿ ಹಿರಿಯ ಅಧೀಕ್ಷಕ ಜಯಸಿಂಹ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತು.
ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಹಾಗೂ ಆರ್.ವಿ.ರವೀಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು, ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ. ಜಯಸಿಂಹ ಅವರ ಮೇಲಿರುವ ಆರೋಪದ ಸ್ವರೂಪ ಮತ್ತು ಈಗಾಗಲೇ ಅವರು ಕಾರಾಗೃಹದಲ್ಲಿ ಕಳೆದ ಅವಧಿಯನ್ನು ಪರಿಗಣಿಸಿ ಅವರಿಗೆ ಜಾಮೀನು ಮಂಜೂರು ಮಾಡುವುದು ಸೂಕ್ತ ಎಂದು ಭಾವಿಸಲಾಯಿತು ಎಂದು ಹೇಳಿತು. ಜಯಸಿಂಹ ಮತ್ತು ಉಪ ಅಧೀಕ್ಷಕ ನಂಜಪ್ಪ ಅವರು ಕಾರಾಗೃಹದಲ್ಲಿ ಮೊಬೈಲ್ ಬಳಸಲು ಅಬ್ದುಲ್ ಕರೀಂ ತೆಲಗಿಗೆ ನೆರವಾಗಿದ್ದರು ಎಂಬ ಆರೋಪದ ಮೇಲೆ 2003ರ ಡಿಸೆಂಬರ್ 9 ರಂದು ಸಿಬಿಐ ಅವರನ್ನು ಬಂಧಿಸಿತ್ತು. ಕಳೆದ ಏಪ್ರಿಲ್ 17ರಂದೇ ನಂಜಪ್ಪ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು.

2007: ನೇಮಕಾತಿಯ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ ಅಂಕಗಳನ್ನು ನಿಗದಿಪಡಿಸುವ ಅಧಿಕಾರ ಉದ್ಯೋಗ ನೀಡುವವರಿಗೆ ಇರುತ್ತದೆ. ಆದರೆ ನಿಯಮಗಳಲ್ಲಿ ಅವಕಾಶ ಇಲ್ಲದಿದ್ದರೆ ಈ ಅಂಕಗಳನ್ನು ನಂತರ ಕಡಿಮೆ ಮಾಡುವ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಮೀಸಲು ಗ್ಯಾಂಗ್ ಮನ್ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ದೊರೆಯದಿರುವುದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳ ನೇಮಕಕ್ಕೆ ಅನುಕೂಲವಾಗುವಂತೆ ಪೂರ್ವ ಕರಾವಳಿ ರೈಲ್ವೆ (ಇಸಿಆರ್) ಕನಿಷ್ಠ ಅಂಕಗಳನ್ನು ಕಡಿಮೆ ಮಾಡಿದ್ದನ್ನು ಪೀಠ ಅನೂರ್ಜಿತಗೊಳಿಸಿತು.

2007: ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ಎರಡು ತಿಂಗಳಿಂದ ಮಳೆಯ ಪ್ರಕೋಪ ಹೆಚ್ಚಿದ ಹಿನ್ನೆಲೆಯಲ್ಲಿ ಅನೇಕ ಗ್ರಾಮಗಳು ಜಲಾವೃತಗೊಂಡಿವು. ಸುರಕ್ಷತಾ ಕ್ರಮವಾಗಿ ಒಂದು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಯಿತು.

2007: ಒರಿಸ್ಸಾದ ಬಾಲ ಮ್ಯಾರಥಾನ್ ಓಟಗಾರ ಬುಧಿಯಾ ಸಿಂಗ್ ನನ್ನು ಒರಿಸ್ಸಾ ಸರ್ಕಾರ ದತ್ತು ತೆಗೆದುಕೊಂಡಿತು. ಅವನ ತಾಯಿ ಈ ಕುರಿತ ಅಧಿಕೃತ ಪತ್ರಗಳಿಗೆ ಈದಿನ ಇಲ್ಲಿ ಸಹಿ ಹಾಕಿದರು.
ಸೆ. 4 ರಂದು ಈಕೆ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ದೇಬಸಿಸ್ ನಾಯಕ್ ಅವರನ್ನು ಭೇಟಿ ಮಾಡಿ, ತನಗಿರುವ 2 ಸಾವಿರ ರೂ ಆದಾಯದಲ್ಲಿ ತನ್ನ ನಾಲ್ಕೂ ಮಕ್ಕಳನ್ನು ಸಾಕಲು ಕಷ್ಟವಾಗುತ್ತಿದ್ದು ಬುಧಿಯಾನಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಕೇಳಿಕೊಂಡಿದ್ದರು.
ಹೊಸ ಮನೆ ಮತ್ತು ಹೊಸ ಸ್ನೇಹಿತರೊಂದಿಗೆ ನಾನು ಈಗ ಸಂತೋಷವಾಗಿದ್ದೇನೆ ಎಂದು ಬುಧಿಯಾ ಹರ್ಷ ವ್ಯಕ್ತಪಡಿಸಿದ.

2007: ಈ- ಮೇಲ್ ನಲ್ಲಿ ಬಂದ ಕೋರಿಕೆಯನ್ನು ಗಣನೆಗೆ ತೆಗೆದುಕೊಂಡು ಚೆನ್ನೈಯ ಕೌಟುಂಬಿಕ ನ್ಯಾಯಾಲಯವೊಂದು ವಿದೇಶದಲ್ಲಿ ನೆಲೆಸಿದ ದಂಪತಿಗೆ ವಿಡಿಯೊ ಕಾನ್ಫರೆನ್ಸ್ ಸಹಾಯದಿಂದ ಕೇವಲ 15 ನಿಮಿಷದಲ್ಲಿ ವಿಚ್ಛೇದನ ನೀಡಿತು. ಗಂಡ- ಹೆಂಡತಿ ಇಬ್ಬರೂ ಸಾಫ್ಟ್ ವೇರ್ ಉದ್ಯೋಗದಲ್ಲಿದ್ದು, ಪರಸ್ಪರ ಭಿನ್ನಾಭಿಪ್ರಾಯದಿಂದ ಬೇರೆಯಾಗಲು ಬಯಸಿದ್ದರು. ಆದರೆ ಗಂಡ ಅಮೆರಿಕದಲ್ಲಿದ್ದರೆ, ಹೆಂಡತಿ ನೆಲೆಸಿರುವುದು ಆಸ್ಟ್ರೇಲಿಯಾದಲ್ಲಿ. ಹಾಗಾಗಿ  ಅರ್ಜಿ ವಿಚಾರಣೆಯಲ್ಲಿ ಇಬ್ಬರೂ ಗೈರುಹಾಜರಾಗಿದ್ದರು. ತಾವು ವಿಚಾರಣೆಯ ದಿನ ಹಾಜರಾಗದಿರಲು ಸಾಧ್ಯವಾಗದ ಬಗ್ಗೆ ಮೊದಲೇ ನ್ಯಾಯಾಲಯಕ್ಕೆ ತಿಳಿಸಿದ್ದರು. ವಿಚ್ಛೇದನ ಬಯಸಿ ಅರ್ಜಿ ಸಲಿಸಿದ ಈ ದಂಪತಿ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವುದರಿಂದ ಆಯಾ ದೇಶದಲ್ಲೇ ಕುಳಿತು ವಿಡಿಯೊ ಕಾನ್ಫರೆನ್ಸ್ ಮೂಲಕ ಇಬ್ಬರೂ ನೀಡಿದ ಹೇಳಿಕೆಯನ್ನು ನ್ಯಾಯಾಧೀಶ ಆರ್.ದೇವದಾಸ್ ದಾಖಲಿಸಿಕೊಂಡರು. ದಂಪತಿಯನ್ನು ವಿಡಿಯೊದಲ್ಲಿ ಗುರುತಿಸಲು ರಕ್ತ ಸಂಬಂಧಿಗಳನ್ನು ಕೋರ್ಟಿಗೆ  ಕರೆಸಲಾಗಿತ್ತು. ದಂಪತಿ ಪರ ವಕೀಲರು ಹಾಗೂ ಸಂಬಂಧಿಕರು ನಂತರ ಈ ವಿಚ್ಛೇದನಕ್ಕೆ ಒಪ್ಪಿ ಸಹಿ ಹಾಕಿದರು. ಕೇವಲ 15 ನಿಮಿಷಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಿತು. ಇದಕ್ಕೆ ತಗುಲಿದ್ದು ಕೇವಲ 300 ರೂಪಾಯಿ. ಸಾಮಾನ್ಯವಾಗಿ ಬೇರೆ ವಿಚ್ಛೇದನ ಪ್ರಕ್ರಿಯೆಗೆ 2 ಲಕ್ಷ ರೂ ಖರ್ಚಾಗುತ್ತಿತ್ತು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಪೈಕಿ ಖಾತಾ ಬಜಾರ್ ಮತ್ತು ಹೋಟೆಲ್ ಸೀರಾಕಿನಲ್ಲಿ ಸಂಭವಿಸಿದ ಸ್ಫೋಟಗಳ ಆರೋಪಿ ಪರ್ವೇಜ್ ನಾಸಿರ್ ಅಹಮದ್ ಶೇಖ್ ತಪ್ಪಿತಸ್ಥ ಎಂದು ವಿಶೇಷ ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಟೈಗರ್ ಮೆಮೆನ್ ನ ಸಹಚರನಾಗಿದ್ದ ಶೇಖ್ 1993ರ ಮಾಚರ್್ 12ರಂದು ಸ್ಕೂಟರಿನಲ್ಲಿ ಆರ್ ಡಿಎಕ್ಸ್ ಸ್ಫೋಟಕಗಳನ್ನು ಇರಿಸಿ ಖಾತಾ ಬಜಾರಿನಲ್ಲಿ ಇಟ್ಟಿದ್ದ. ಈ ಸ್ಫೋಟದಲ್ಲಿ ನಾಲ್ವರು ಮೃತರಾಗಿದ್ದರು.

2006: ಬಂಗಾಳ ಕೊಲ್ಲಿಯಲ್ಲಿ ಎದ್ದ ಬಿರುಗಾಳಿಗೆ ಸಿಲುಕಿ 100ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಮುಳುಗಿದ ಪರಿಣಾಮವಾಗಿ ಕನಿಷ್ಠ 73 ಜನ ಮೃತರಾಗಿ ಇತರ 100ಕ್ಕೂ ಹೆಚ್ಚು ಜನ ಕಣ್ಮರೆಯಾದರು.

2006: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ವೈಫಲ್ಯಗಳನ್ನು ದುರಸ್ತಿ ಮಾಡಲು ತೆರಳಿದ್ದ `ಅಟ್ಲಾಂಟಿಸ್' ಬಾಹ್ಯಾಕಾಶ ನೌಕೆಯು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ಧರೆಗಿಳಿಯಿತು. ಆರು ಗಗನಯಾನಿಗಳು ಮತ್ತು 15,880 ಕೆ.ಜಿ. ತೂಕದ ಸಾಮಗ್ರಿಗಳನ್ನು ಈ ನೌಕೆಯು ತನ್ನೊಂದಿಗೆ ಬಾಹ್ಯಾಕಾಶಕ್ಕೆ ಒಯ್ದಿತ್ತು. ಈ ಗಗನ ಯಾನಿಗಳು 12 ದಿನಗಳ ಕಾಲ ಅಂತರಿಕ್ಷದಲ್ಲಿದ್ದು ನಿಲ್ದಾಣದ ದುರಸ್ತಿಕಾರ್ಯಗಳನ್ನು ಪೂರೈಸಿ ಈದಿನ ಯಶಸ್ವಿಯಾಗಿ ಧರೆಗೆ ವಾಪಸಾದರು.

2006: ಖಜಕಿಸ್ಥಾನ ಮತ್ತು ಉಕ್ರೇನಿನ ಕಲ್ಲಿದ್ದಲು ಗಣಿಗಳಲ್ಲಿ ಸಂಭವಿಸಿದ ಆಕಸ್ಮಿಕ ಸ್ಫೋಟ ಮತ್ತು ವಿಷಾನಿಲ ಸೋರಿಕೆಯಿಂದಾಗಿ ಕನಿಷ್ಠ 53 ಜನ ಮೃತರಾದರು. ಸೋವಿಯತ್ ಒಕ್ಕೂಟದ ಗಣಿ ಕ್ಷೇತ್ರದಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತಗಳಲ್ಲಿ ಇದು ಅತ್ಯಂತ ದೊಡ್ಡ ದುರಂತ.

2006: ಮಾಜಿ ಅಥ್ಲೆಟ್ ಮತ್ತು ಖ್ಯಾತ ಕೋಚ್ ಆಗಿದ್ದ ಎ.ಜೆ. ಡಿ.ಸೋಜಾ (67) ಅವರು ಚೆನ್ನೈಯಲ್ಲಿ ನಿಧನರಾದರು. ತಮಿಳುನಾಡಿನ ಹಲವಾರು ಅಥ್ಲೆಟ್ ಗಳಿಗೆ ತರಬೇತಿ ನೀಡಿ, ಅವರನ್ನು ರಾಜ್ಯ- ರಾಷ್ಟ್ರಕ್ಕೆ ಹೆಸರು ತರುವಂತಹ ಉತ್ತಮ ಅಥ್ಲೆಟ್ ಗಳನ್ನಾಗಿ ಡಿಸೋಜಾ ಅವರು ರೂಪಿಸಿದ್ದರು.

1998: ಒಲಿಂಪಿಕ್ ಸ್ವರ್ಣ ಪದಕ ವಿಜೇತೆ ಓಟಗಾರ್ತಿ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಅವರು ಕ್ಯಾಲಿಫೋರ್ನಿಯಾದ ಮಿಷನ್ ವೀಜೋದಲ್ಲಿನ ತಮ್ಮ ಮನೆಯಲ್ಲಿ ಮೃತರಾಗಿದ್ದುದು ಪತ್ತೆಯಾಯಿತು. ಆಗ ಅವರ ವಯಸ್ಸು 38 ವರ್ಷ.

1995: ಗಣೇಶ ಹಾಲು ಕುಡಿಯುತ್ತಾನೆ ಎಂಬ ವದಂತಿ ರಾಷ್ಟ್ರದಾದ್ಯಂತ ಹರಡಿದ ದಿನವಿದು. ಮೊದಲಿಗೆ ನವದೆಹಲಿಯಲ್ಲಿ ಹರಡಿದ ಈ ವದಂತಿ ನಂತರ ದೇಶದಾದ್ಯಂತ ಹರಡಿ ಆಸ್ತಿಕರು ಮತ್ತು ನಾಸ್ತಿಕರು ಹುಬ್ಬೇರಿಸಿದರು. ಸೊಂಡಿಲ ಮೂಲಕ ಗಣೇಶ ಹಾಲು ಸ್ವೀಕರಿಸುತ್ತಾನೆ ಎಂದು ನಂಬಿದ ಭಕ್ತರು ಹಾಲಿನ ನೈವೇದ್ಯದ ಪ್ರಯೋಗ ಮಾಡಿದರೆ, ವಿಗ್ರಹದ ಒಳಗಿನ ನಿರ್ವಾತಪ್ರದೇಶದಿಂದಾಗಿ ಈ ರೀತಿ ಆಗುತ್ತದೆ ಎಂದು ಸಂಶೋಧಕರು ವಿವರಣೆ ನೀಡಿದರು.

1994: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಉದ್ಯಮಿ ರಾಮಕೃಷ್ಣ ಬಜಾಜ್ ನಿಧನ.

1981: ನಾಲ್ಕು ದಶಕಗಳ ಕಾಲ ತಮ್ಮ ಕಂಠ ಮಾಧುರ್ಯದಿಂದ ಜನಮನ ರಂಜಿಸಿದ ಪಾಂಡೇಶ್ವರ ಕಾಳಿಂಗರಾವ್ (67) ಅವರು ಈದಿನ ಬೆಳಗ್ಗೆ ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ತಮ್ಮ ಮನೆಯಲ್ಲಿ ನಿಧನರಾದರು.

1981: ಬ್ರಿಟಿಷ್ ಹೊಂಡುರಾಸ್ ಎಂದೇ ಖ್ಯಾತಿ ಪಡೆದಿದ್ದ ಬೆಲಿಝ್ ಸ್ವತಂತ್ರವಾಯಿತು.

1964: ಬ್ರಿಟಿಷರ 164 ವರ್ಷಗಳ ಆಳ್ವಿಕೆಯ ಬಳಿಕ ಮಾಲ್ಟಾ ಸ್ವತಂತ್ರ ರಾಷ್ಟ್ರವಾಯಿತು.

1947: ಅಮೆರಿಕದ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ ಸ್ಟೀಫನ್ (ಎಡ್ವಿನ್) ಕಿಂಗ್ ಜನ್ಮದಿನ. ಭಯಾನಕ ಕಾದಂಬರಿಗಳಿಗಾಗಿ ಟೀಕೆಯ ಜೊತೆಗೇ ಜನಪ್ರಿಯತೆಯನ್ನೂ ಅವರು ಗಳಿಸಿದ್ದರು.

1945: ಸಾಹಿತಿ ಸರೋಜಿನಿ ಚವಲಾರ ಜನನ.

1912: ರಾಜಕಾರಣಿ ಫಿರೋಜ್ ಗಾಂಧಿ ಜನನ.

1907: ಸ್ವಾತಂತ್ರ್ಯ ಹೋರಾಟಗಾರ ಯು.ಎನ್. ಧೇಬರ್ (1907-77) ಜನ್ಮದಿನ. 1955-59ರ ಅವದಿಯಲ್ಲಿ ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು.

1898: ಖ್ಯಾತ ಪತ್ರಕರ್ತ ತುಷಾರ ಕಾಂತಿ ಘೋಷ್ ಜನನ.

1882: ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟ ಖ್ಯಾತರಾದ ಬೆಳ್ಳಾವೆ ನರಹರಿ ಶಾಸ್ತ್ರಿ (21-9-1882ರಿಂದ 21-6-1961) ಅವರು ನರಸಾವಧಾನಿಗಳು- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು. ನಾಟಕಗಳು ಇಲ್ಲದೆ ರಂಗಭೂಮಿ ಸೊರಗಿದ್ದ ಕಾಲದಲ್ಲಿ ನಾಟಕಗಳನ್ನು ಬರೆದುಕೊಟ್ಟು ಕನ್ನಡಿಗರಲ್ಲಿ ಹಾಸ್ಯ ಪ್ರಜ್ಞೆಯನ್ನು ಮೂಡಿಸಿದವರು ಇವರು.

1452: ಇಟಲಿಯ ಕ್ರೈಸ್ತ ಪ್ರಚಾರಕ ಗಿರೊಲಾಮೊ ಸವೊನರೋಲಾ (1452-98) ಜನ್ಮದಿನ. ಭ್ರಷ್ಟ ಪಾದ್ರಿಗಳ ಜೊತೆಗೆ ಘರ್ಷಣೆಗೆ ಹೆಸರಾಗಿದ್ದ ಅವರು 1494ರಲ್ಲಿ ಫ್ಲಾರೆನ್ಸ್ ಪ್ರಜಾತಾಂತ್ರಿಕ ಗಣರಾಜ್ಯವನ್ನು ಸ್ಥಾಪಿಸಿ ಅದರ ಏಕಮೇವ ಧುರೀಣರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment